ಅಟ್ಟಹಾಸ ಸಿನಿಮಾ ಜನರಿಗೆ ಗೊತ್ತಿರುವ ವಿಷಯವನ್ನು ಬಿಟ್ಟು ಬೇರೇನೂ ಹೇಳದ ಕಥಾವಸ್ತುವನ್ನು ಹೊಂದಿದ್ದರೂ, ವೀರಪ್ಪನ್ ಬಗ್ಗೆ ಜನರಲ್ಲಿರುವ ಕೌತುಕತೆಯು ಪ್ರೇಕ್ಷಕನನ್ನು ಚಿತ್ರಮಂದಿರದ ತನಕ ಆಕರ್ಷಿಸುತ್ತದೆ. ಎ.ಎಂ. ಆರ್ ರಮೇಶ್ ನಿರ್ಮಿಸಿ, ನಿರ್ದೇಶಿಸಿರುವ 'ಅಟ್ಟಹಾಸ' ಸಿನಿಮಾ, ಪ್ರೇಕ್ಷಕನ ನಿರೀಕ್ಷೆಯ ಮಟ್ಟವನ್ನು ಮುಟ್ಟಿಲ್ಲ ಎಂಬುದು ಹಲವು ಪ್ರೇಕ್ಷಕರ ಅಭಿಪ್ರಾಯ.
ಕಥೆಯಲ್ಲಿ ಹೊಸದೇನೂ ಇಲ್ಲವಾದರೂ ವೀರಪ್ಪನ್ ಎಂಬ ವ್ಯಕ್ತಿಯ ಜೀವನ ವೃತ್ತಾಂತ ರೋಚಕವಾಗಿ ಮೂಡಿಬಂದಿದ್ದಂತೂ ಸತ್ಯ. ವೀರಪ್ಪನ್ ಬಾಲ್ಯ, ದಂತ ಚೋರರ ಜೊತೆ ಆತನ ಒಡನಾಟ, ಅವರ ನಡುವೆಯೇ ಸೇರಿಕೊಂಡು ಆತ ಪಳಗುವುದು, ಆ ಗುಂಪಿನಲ್ಲಿ ಉತ್ತಮ ಗುರಿಕಾರ ಎಂದೆನಿಸಿಕೊಂಡು ಪ್ರಖ್ಯಾತನಾಗುವುದು, ನಂತರ ತನ್ನದೇ ಗುಂಪು ಕಟ್ಟಿಕೊಂಡು ಕಾಡನ್ನು ದೋಚುವುದು, ಹೀಗ ವೀರಪ್ಪನ್ ಜೀವನದ ಎಲ್ಲಾ ಮಜಲುಗಳೂ ವ್ಯವಸ್ಥಿತವಾಗಿ ಮೂಡಿಬಂದಿದೆ.
ಪೋಲಿಸರ ತಂತ್ರಕ್ಕೆ ವೀರಪ್ಪನ್ ಬಲಗೈ ಬಂಟ ಗುರುನಾಥ ಸಾವಿಗೀಡಾದ ನಂತರ ಆತನ ಸೇಡಿಗೆ ಒಂದಿಷ್ಟು ಪೋಲೀಸರು ಬಲಿಯಾಗಿ ಹೋಗುತ್ತಾರೆ. ಪೊಲೀಸ್ ಹಾಗೂ ಸರ್ಕಾರದ ಮೇಲಿನ ಸೇಡಿಗಾಗಿ ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ ಕುಮಾರ್ ಅಪಹರಣ ಮಾಡಿದ ವೀರಪ್ಪನ್, ಅವರನ್ನು ಕಾಡಿನಲ್ಲಿ ಹೇಗೆ ನೋಡಿಕೊಳ್ಳುತ್ತಾನೆ ಎಂಬ ವಿಷಯವೂ ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ನಂತರ ಮಾಜಿ ಮಂತ್ರಿ ನಾಗಪ್ಪ ಅಪಹರಣ, ಅವರ ಕೊಲೆ ಹೀಗೆ ಎಲ್ಲಾ ಕಡೆಗಳಲ್ಲೂ ವೀರಪ್ಪನ್ ಅಟ್ಟಹಾಸ ಮೊಳಗುತ್ತದೆ, ನಂತರ ಪೋಲಿಸರ ತಂತ್ರಗಳಿಗೆ ಆ ಅಟ್ಟಹಾಸ ಅವಸಾನವಾಗುತ್ತದೆ.
ಚಿತ್ರದಲ್ಲಿ ವೀರಪ್ಪನ್ ಪಾತ್ರಕ್ಕೆ ಜೀವತುಂಬಿದ 'ಕಿಶೋರ್' ಅದ್ಭುತವಾಗಿ ಅಭಿನಯಿಸಿದ್ದಾರೆ. ಪೋಲಿಸ್ ಪಾತ್ರದಲ್ಲಿ ಅರ್ಜುನ್ ನಟನೆ ಬಹಳ ಚೆನ್ನಾಗಿದೆ. ರವಿಕಾಳೆ, ಭಾವನ, ಸುರೇಶ್ ಓಬಿರಾಯ್, ಲಕ್ಷ್ಮಿ ರೈ, ವಿಜಯ ಲಕ್ಷ್ಮಿ, ಎ.ಎಂ.,ಆರ್ ರಮೇಶ್, ಶ್ರವಂತ್ ಪಾತ್ರಕ್ಕೆ ತಕ್ಕಂತೆ ಉತ್ತಮವಾಗಿ ಅಭಿನಯಿಸಿದ್ದಾರೆ. ಆಡುಕುಳಂನ ಜಯಪಾಲಂ ಎಕ್ಸ್ ಮಿಲ್ಟ್ರಿ ಪೆರಿವರ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಉತ್ತಮ ತಾಂತ್ರಿಕ ಕೆಲಸಗಾರರಾದ ರಮೇಶ್, ಈ ಚಿತ್ರದಲ್ಲಿಯೂ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ವಿಜಯ್ ಮಿಲ್ಟನ್ರ ಉತ್ತಮ ಕ್ಯಾಮರಾ ವರ್ಕ್, ಅದಕ್ಕೆ ಹೊಂದಿಕೆಯಾಗುವಂತೆ ಉತ್ತಮ ಸಂಗೀತ ನೀಡಿರುವ ಸಂದೀಪ್ ಚೌಟಾ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಆಂಟೊನಿರವರ ಸಂಕಲನ ಕೂಡ ಉತ್ತಮವಾಗಿದೆ.
ಸೈನೆಡ್ ಚಿತ್ರದ ಮೂಲಕ ಡೊಕ್ಯುಮೆಂಟರಿ ಸಿನಿಮಾವನ್ನು ಯಶಸ್ವಿಯಾಗಿ ಮಾಡಬಲ್ಲ ಉತ್ತಮ ನಿರ್ದೇಶಕ ಎಂದು ಕರೆಸಿಕೊಂಡ ರಮೇಶ್ ಈ ಸಿನಿಮಾದಲ್ಲಿ ಪ್ರೇಕ್ಷಕನ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲ. ವೀರಪ್ಪನ್ ಕಥೆ ಅತೀ ಸೂಕ್ಷ್ಮ ಹಾಗೂ ಬಹಳಷ್ಟು ಒಳಸುಳಿಗಳಿರುವ ವಿಷಯವಾಗಿದ್ದರಿಂದ ಯಥಾವತ್ತಾಗಿ ಚಿತ್ರಿಸಲು ಸಾಧ್ಯವೂ ಇಲ್ಲ. ಏಕೆಂದರೆ ಕಥೆಗೆ ಸಂಬಂಧಿಸಿದ ಒಬ್ಬೊಬ್ಬ ವ್ಯಕ್ತಿಯು ಅವರರವರ ಮೂಗಿನ ನೇರಕ್ಕೆ ಕಥೆ ಹೇಳಿರಬಹುದು, ಎಲ್ಲವನ್ನು ಸಮೀಕರಿಸಿ, ತಮ್ಮ ರೀತಿಯಲ್ಲಿ ಚಿತ್ರವನ್ನು ಪ್ರಸ್ತುತ ಪಡಿಸುವಲ್ಲಿ ಉತ್ತಮ ಪ್ರಯತ್ನ ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನಂತೆ ಕೆಲವಾರು ದೃಶ್ಯಗಳನ್ನು ಬ್ಲರ್ ಮಾಡಲಾಗಿದ್ದು, ಡಾ. ರಾಜ್ ಕುಮಾರ್ ಅಪಹರಣದ ವಿಷಯವನ್ನು ಸೂಷ್ಮವಾಗಿ ಹ್ಯಾಂಡಲ್ ಮಾಡಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ, ಮಾಧ್ಯಮದ ಕೆಂಗಣ್ಣಿಗೆ ಗುರಿಯಾಗದ ಹಾಗೆ ಕೆಲವಾರು ವಿಷಯಗಳನ್ನು ತೇಲಿಸಿ, ಬುದ್ದಿವಂತಿಕೆ ಮೆರೆದಿದ್ದಾರೆ.
ಚಿತ್ರದ ಕೊನೆಯಲ್ಲಿ ನೋಡುಗ ಏನೂ ಅಂತಾ ವಿಶೇಷ ಇಲ್ಲ, ಎಲ್ಲಾ ಗೊತ್ತಿರುವುದನ್ನೇ ಹೇಳಿದ್ದಾರೆ ಎಂದರೂ, ಒಮ್ಮೆ ನೋಡಬಹುದು ಎಂದು ಹೇಳಿ ಹೊರಹೋಗುತ್ತಾನೆ.
ಬರೀ ಪ್ರೇಮಕಥೆ, ಹಳ್ಳಿಯ ಹುಡುಗ ಸಿಟಿಗೆ ಬರುವ ಲಾಂಗೂ ಮಚ್ಚು ಕಥೆಗಳೇ ಬರುತ್ತಿರುವ ದಿನಗಳಲ್ಲಿ, ’ವ್ಯಕ್ತಿ ಜೀವನದ ಕಥೆ’ ನೋಡುಗರಿಗೆ ಹೊಸತು ಎಂದು ಅನಿಸಿರದೇ ಇರದು.
ವರದಿ: ನಟರಾಜ್. ಎಸ್ ಭಟ್