ವಾರ ಬಂತಮ್ಮಾ... ’ಶಿವ’ ಶುಕ್ರವಾರ ಬಂತಮ್ಮಾ... ಎಂದು ಶಿವಣ್ಣನ ಅಭಿಮಾನಿಗಳು ಹಾಡಲು ಒಂದು ಸಕಾಲ. ಏಕೆಂದರೆ ಈ ವಾರ ಶಿವಣ್ಣ ಅಭಿನಯಿಸಿದ ಲಕ್ಷ್ಮೀ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ.
ನಿರ್ದೇಶಕ ರಾಘವಲೋಕಿಯವರು ಕನ್ನಡದಲ್ಲೊಂದು ತೆಲುಗು ಸಿನಿಮಾವನ್ನು ಕಟ್ಟಿಕೊಡುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆಂದರೆ ತೆಲುಗಿನ ಟಚ್ಚ್ ಕೊಟ್ಟು, ಒಂದಷ್ಟು ಫೈಟ್ಗಳೊಂದಿಗೆ, ಕನ್ನಡದ ಹೂರಣ ಬೆರೆಸಿ, ಕನ್ನಡದ ಜನತೆಗೆ ಸಂಕ್ರಾಂತಿಯ ಲಕ್ಷ್ಮೀ ಹೋಳಿಗೆ ಸ್ವಲ್ಪ ಸಿಹಿ ಕಮ್ಮಿ ಎನಿಸುತ್ತದೆ.
ಶಿವಣ್ಣನವರು ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವತುಂಬಿ ಪರಕಾಯ ಪ್ರವೇಶ ಮಾಡುವುದರಲ್ಲಿ ನಿಸ್ಸೀಮರು. ಅವರ ಎನರ್ಜಿಗೆ ಹ್ಯಾಟ್ಸಾಫ್. ಲಕ್ಷ್ಮೀ ಚಿತ್ರದಲ್ಲೂ ಒಬ್ಬ ಸಿ.ಬಿ.ಐ ಆಫೀಸರ್ ಆಗಿ ಹೊಸದೊಂದು ರೀತಿಯಲ್ಲಿ ತಾನೊಬ್ಬ ಉತ್ತಮ ನಟ ಎಂಬುದನ್ನು ಸಾಬೀತು ಮಾಡಿದ್ದಾರೆ. ಚಿತ್ರದ ನಾಯಕ ಮೊದಲಲ್ಲಿ ಒಂದು ಹುಡುಗಿಯನ್ನು ಗಲ್ಲಿಗಲ್ಲಿಯಲ್ಲಿ ಅಟ್ಟಿಸಿ ಕೊಂಡು ಹೋಗಿ, ಹೊಡೆದು ಹಿಡಿದುಕೊಂಡು ಬರುತ್ತಾನೆ. ಇದೇನು..? ಓಂ ಚಿತ್ರದ ಸತ್ಯನ ಕ್ಯಾರೆಕ್ಟರ್ನಂತೆ ಇದೆಯಲ್ಲ ಎಂದು ಕೊಂಡಿರಾ..? ಅಲ್ಲೊಂದು ತಿರುವಿನಿಂದ. ಆತ ಏನು..? ಏಕೆ ಆ ಹುಡುಗಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ..? ಎಂಬುದೆಲ್ಲಾ ತಿಳಿಯುತ್ತದೆ.
ಲಕ್ಷ್ಮಿ ನಾರಾಯಣ್(ಶಿವರಾಜ್ ಕುಮಾರ್) ಸಿ.ಬಿ.ಐ ಆಫೀಸರ್, ಆತನ ಹೆಂಡತಿ ಪ್ರಿಯ (ಪ್ರಿಯಾಮಣಿ), ಸುಖಿ ದಾಂಪತ್ಯ ಜೀವನ. ಒಂದು ಗಣಿ ಮಾಫಿಯಾದ ಬೆನ್ನುಹತ್ತುವ ಲಕ್ಷ್ಮೀ. ಕೇವಲ 30 ನಿಮಿಷಗಳಲ್ಲಿ ಒಂದರ ಮೇಲೊಂದರಂತೆ 3 ಫೈಟ್ಗಳು ಅಜೀರ್ಣವಾಗಿಸುತ್ತದೆ. ಈ ಮಧ್ಯೆ ನಾಯಕ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಅವಳನ್ನು ಹುಡುಕಿ ಕೊಂಡು ಹೋಗುವ ನಾಯಕ, ಟೆರರ್ರಿಸಂನ ಹಿಂದೆ ಬೀಳುತ್ತಾನೆ. ಅದು ದೇಶದಿಂದ ದೇಶಕ್ಕೆ ಹೋಗುತ್ತದೆ. ಅಲ್ಲಿ ಪ್ರಿಯಾ ರೇಶ್ಮ ಎಂಬ ಹೊಸ ಪಾತ್ರದಲ್ಲಿ ಪ್ರತ್ಯಕ್ಷ. ಕಡೆಯಲ್ಲಿ ದೀಪಾವಳಿ ಪಟಾಕಿ ಸೀನ್ನೊಂದಿಗೆ ಸಿನಿಮಾ ಅಂತ್ಯಗೊಳ್ಳುತ್ತದೆ.
ಅಲ್ಲಿ ಇದ್ದವಳು ಯಾರು..? ಅವಳಿಗೂ ಟೆರರ್ರಿಸಂಗೂ ಏನು ಸಂಬಂಧ..? ಅಲ್ಲಿ ಯಾರಿಗೆ ಕೆಲಸ ಮಾಡುತ್ತಿದ್ದಳು, ಅವಳೇ ಟೆರ್ರರಿಸ್ಟಾ..? ಎಂಬೆಲ್ಲಾ ಪ್ರಶ್ನೆಗಳು ಮನಸ್ಸಿಗೆ ಹುಟ್ಟಿಸುವಂತೆ ಮಾಡುವ ಚಿತ್ರಕಥೆ ಚೆನ್ನಾಗಿದೆಯಾದರೂ, ಹಳೆಯ ಸೀನ್ಗಳಿಂದ ಬೋರಿಂಗ್ ಆಗುತ್ತದೆ. ಹಾಂಕಾಂಗ್ನಲ್ಲಿ ಸಿಗುವ ’ಡೀಲ್ ರಾಜು’ ಪಾತ್ರಧಾರಿ ರಂಗಾಯಣ ರಘು ನಗಿಸುವ ಪ್ರಯತ್ನ ಮಾಡುತ್ತಾರೆ. ಅವಿನಾಶ್ ತಮ್ಮ ಪಾತ್ರದಿಂದ ಗಮನ ಸೆಳೆಯುತ್ತಾರೆ. ರವಿಕಾಳೆ, ಗುರುದತ್ತ್, ಆದರ್ಶ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಆಶಿಷ್ ವಿದ್ಯಾರ್ಥಿ ಚಿತ್ರದ ಖಳನಾಯಕರಾಗಿ ಮಿಂಚಿದ್ದಾರೆ.
ಚಿತ್ರದಲ್ಲಿ ಪ್ರಿಯಾಮಣಿ ಸಮರ್ಥವಾಗಿ ಪಾತ್ರ ನಿರ್ವಹಿಸಿದ್ದಾರೆ. ಗ್ಲಾಮರ್ ಗೊಂಬೆಯಂತೆ ಕೆಲವು ಕಡೆಗಳಲ್ಲಿ ಕಂಡರೂ, ಪಾತ್ರದ ತೂಕ ಅರಿತು, ಜನರಮನಸ್ಸನ್ನು ತಲುಪುವಲ್ಲಿ ಪ್ರಿಯಾ ಯಶಸ್ವಿಯಾಗಿದ್ದಾರೆ.
ಗುರುಕಿರಣ್ ಸಂಗೀತದಲ್ಲಿ ನೀನೇನೇ.. ನೀನೇನೇ.. ಹಾಡು ಮನಸ್ಸಿನಲ್ಲಿ ಉಳಿಯುತ್ತವೆ ಎನ್ನುವುದನ್ನು ಬಿಟ್ಟರೆ ಬೇರಾವ ಗೀತೆಯು ಮನದಲ್ಲಿ ಉಳಿಯುವುದಿಲ್ಲ. ಆದರೆ ಹಾಡುಗಳ ಚಿತ್ರೀಕರಣ ಅದ್ಧೂರಿಯಾಗಿ ಮಾಡಲಾಗಿದೆ.
ಎಮ್,ಎಸ್. ರಮೇಶ್ರವರ ಸಂಭಾಷಣೆ,ಚಂದ್ರಶೇಖರ್ ಛಾಯಾಗ್ರಹಣ ಚಿತ್ರಕ್ಕೆ ಹೊಂದಿಕೊಂಡಿದೆ. ರವಿವರ್ಮ, ಥ್ರಿಲ್ಲರ್ ಮಂಜು ಸಾಹಸ ಚೆನ್ನಾಗಿದೆ. ಎಲ್ಲವು ಚೆನ್ನಾಗಿದ್ದರೂ ಚಿತ್ರಕಥೆ ಹಾಗು ದೃಶ್ಯಗಳು ಹಳತಾಗಿ ನೋಡುಗರು ತಮ್ಮ ತಮ್ಮ ಮುಖ ನೋಡಿಕೊಳ್ಳುವ ಹಾಗೆ ಮಾಡುತ್ತದೆ.
ಶಿವಣ್ಣರವರಂತಹ ಪುಟಿಯುವ ಚೆಂಡು ಎಷ್ಟೇ ಸಮರ್ಥವಾಗಿ ಕಾರ್ಯನಿರ್ವಹಿಸಿದರು ಚಿತ್ರಕಥೆಯು ವೀಕ್ ಆಗಿದ್ದರೆ ಸಿನಿಮಾ ಹೇಗೆ ಯಶಸ್ವಿಯಾದೀತೂ..? ಅಭಿಮಾನಿಗಳಿಂದ ಶಿವಣ್ಣ ಸೀಟಿ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಶಿವಣ್ಣರ ಆಯ್ಕೆಗಳು ಹೀಗೆ ಇದ್ದರೆ ಏಕತಾನತೆ ತರುವುದಲ್ಲಿ ಸಂದೇಹವಿಲ್ಲ.
ವರದಿ: ನಟರಾಜ್.ಎಸ್ ಭಟ್.