ಭಾಗೀರತಿ ಚಿತ್ರದಲ್ಲಿ ಭಾವನಾ
Rating :
Hero :
ಕಿಶೋರ್
Heroine :
ಭಾವನಾ
Other Cast :
ಶ್ರೀನಾಥ್, ತಾರಾ ಮತ್ತಿತರರು.
Director :
ಬರಗೂರು ರಾಮಚಂದ್ರಪ್ಪ
Music Director :
ವಿ.ಮನೋಹರ್
Producer :
ಬಿ.ಕೆ.ಶ್ರೀನಿವಾಸ್
Release Date :
ಇತಿಹಾಸದ ಘಟನೆಯೊಂದು ಕಥೆಯ ರೂಪ ಪಡೆಯುತ್ತದೆ. ಕಥೆ ನಾಟಕವಾಗುತ್ತದೆ. ಅಲ್ಲಿ ಚಿತ್ರಿತವಾಗಿರುವ ಸಾಮಾಜಿಕ ಕಟ್ಟುಪಾಡುಗಳು ವಿಮರ್ಶೆಗೂ ಗುರಿಯಾಗುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಇಂತಹ ಕಥೆಗಳು ಬೆಳ್ಳಿ ತೆರೆ ಮೇಲೂ ರಾರಾಜಿಸುತ್ತವೆ. ಅದೇ ರೀತೀ ಕಥಾನಕ ಉಳ್ಳ 'ಕೆರೆಗೆ ಹಾರ' ಕಥೆ 'ಭಾಗೀರತಿ'ಯಾಗಿ ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ಪ್ರಯತ್ನದಲ್ಲಿದೆ.
ಕಲ್ಲನಕೆರೆ ಮಲ್ಲನಗೌಡರ ಕಿರಿಸೊಸೆ ಭಾಗೀರತಿಯ ತ್ಯಾಗದ ಕಥೆ ಇದು. ಈ ಕಥೆಯನ್ನು ದೃಶ್ಯ ರೂಪಕ್ಕೆ ತರುವ ದೊಡ್ಡ ಪ್ರಯತ್ನವನ್ನು ನಿರ್ದೇಶಕರಾಗಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಜಾನಪದ ಹಿನ್ನೆಲೆಯಲ್ಲಿ ಇದರಲ್ಲೊಂದು ತ್ಯಾಗ, ಮಹಿಳಾವಾದಿಗಳು ಮಹಿಳಾ ಶೋಷಣೆಯಾಗಿ ಇದನ್ನು ಕಂಡರೆ, ಬರಗೂರರು ತಮ್ಮದೇ ಹೊಸ ಕಲ್ಪನೆ ಕಟ್ಟಿಕೊಟ್ಟು ಅದನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕಲ್ಲನಕೇರಿಗೆ ಪ್ರವಾಸ ತೆರಳಿದ ವೇಳೆ ಅಲ್ಲಿ ಶಿಕ್ಷಕರಿಯೊಬ್ಬರು ಮಕ್ಕಳಿಗೆ `ಕೆರೆಗೆ ಹಾರ`ದ ಕತೆ ಹೇಳುತ್ತಾರೆ. ಅಲ್ಲಿಂದಲೇ ಚಿತ್ರದ ಕಥೆ ಆರಂಭ. ಹಾಗೆ ಹೇಳುವಾಗಲೇ ಇದೊಂದು ಮೌಢ್ಯದ ಕತೆ ಎಂದು ತಿಳಿಸಲು ಆಕೆ ಮರೆಯುವುದಿಲ್ಲ.
ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಚಿತ್ರಣ ಕಟ್ಟಿಕೊಡುವಾಗ ನಾನಾ ರೂಪಕಗಳನ್ನು ಬಳಸಿದ್ದಾರೆ. ಪಾತ್ರಗಳ ಮೂಲಕ ರೂಪಕಗಳು ಮಾತಾಗಿ ಮೂಡಿರುವುದು ವಿಶೇಷವೆನಿಸುತ್ತದೆ. ಮೊದ ಮೊದಲು ಹಿರಿ ಸೊಸೆ ಬಲಿಯಾಗಬೇಕು ಅನ್ನುವ ಶಾಸ್ತ್ರಿಗಳು. ಇವರ ಮಾತಿಗೆ, 'ಹಿರಿ' ಆಗದು ಅನ್ನುವ ಗೌಡರು. ಇವರೊಳಗಿನ ತರ್ಕ.. ಕೊನೆಗೆ ಹಿರಿ ಅಲ್ಲದಿದ್ದರೆ ಕಿರಿ ಎಂಬ ವಾದ.. ಕಥೆಯಲ್ಲಿ ಇರುವ 'ಕಿರಿ' ಸೊಸೆಯೇ 'ಭಾಗೀರತಿ'. ಆಕೆಯೇ ಈ ಕಥೆಗೆ ಕಥಾನಾಯಕಿ. ಆಕೆ ಅನುಭವಿಸುವ ನೋವು, ದುಃಖ ದುಮ್ಮಾನ, ಎಲ್ಲವೂ ಮನಮುಟ್ಟುವಂತೆ ಚಿತ್ರಿತವಾಗಿದೆ.
ಚಿತ್ರದ ಕೊನೆಯ ದೃಶ್ಯದಲ್ಲಿ ಕತೆ ಕೇಳಿ ಕಣ್ಣೀರಿಟ್ಟ ಮಗುವೊಂದು ಆಕ್ರೋಶದಿಂದ ಕೆರೆಗೆ ಕಲ್ಲು ಹೊಡೆಯುತ್ತದೆ. ಕಣ್ಣೀರ ಕತೆಗೆ ಅದೊಂದು ಮಾನವೀಯ ಸ್ಪಂದನೆ..
ನಿರ್ದೇಶಕ ರಾಮಚಂದ್ರಪ್ಪ ಅವರೇ ಸಂಭಾಷಣೆ, ಸಾಹಿತ್ಯ ಬರೆದಿದ್ದು, ವಿ.ಮನೋಹರ್ ಸಂಗೀತ ಕೂಡಾ ಗಮನ ಸೆಳೆಯುತ್ತದೆ. ಹರೀಶ್ ಸೊಂಡೆಕೊಪ್ಪ ಛಾಯಾಗ್ರಹಣದಲ್ಲಿ ದೃಶ್ಯಗಳು ಬಹಳ ಅಚ್ಚುಕಟ್ಟಾಗಿ ಮೂಡಿವೆ. ಭಾಗೀರತಿ ಪಾತ್ರದಲ್ಲಿ ಭಾವನಾ, ಈಕೆಯ ಗಂಡನಾಗಿ ಕಿಶೋರ್, ಹಿರಿ ಸೊಸೆಯಾಗಿ ತಾರಾ ಗಮನ ಸೆಳೆಯುತ್ತಾರೆ. ಶ್ರೀನಾಥ್, ಶಿವಧ್ವಜ್, ಹೇಮಾ ಚೌಧರಿ, ರವಿಶಂಕರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.