ಹೂರಣವಿಲ್ಲದ ಹೋಳಿಗೆ - ಅರ್ಧ ಬೆಂದಿದೆ
ಇದೇನು ಹೀಗೆ ಇದ್ದಕಿದ್ದ ಹಾಗೆ ಏನೇನೋ ಮಾತಾಡುತ್ತಿದ್ದಾರೆ ಎಂದು ಗಾಭರಿಯಾಗಬೇಡಿ. ಇದೇನು ಅಡಿಗೆ ಕಾರ್ಯಕ್ರಮದ ವಿಷಯವಲ್ಲ. ನಮ್ಮ್ ದುನಿಯಾ ನಮ್ಮ್ ಸ್ಟೈಲ್ ಎಂದು ಹೊಸ ರೀತಿಯಲ್ಲಿ ಹೆಸರಿಟ್ಟು ಮಾಡಿರುವ ಸಿನಿಮಾದ ಹೋಲಿಕೆ ಅಷ್ಟೆ.
ಈ ಸಿನಿಮಾಗಳ ನಿರ್ದೇಶಕರ ಆಯ್ಕೆ ಮಾಡಿಕೊಳ್ಳುವ ವಿಷಯಗಳೇ ಅರ್ಥವಾಗುವುದಿಲ್ಲ. ಸ್ವಲ್ಪವೂ ಓದಿಕೊಳ್ಳದೆ ಸುಮ್ಮನೆ ಕಮರ್ಶಿಯಲ್ ಸಿನಿಮಾಗಳಲ್ಲಿ ಕೆಲಸ ಮಾಡಿ ಬಂದು, ಲಾಂಗು ಮಚ್ಚು ಸಿನಿಮಾ ಮಾಡುವ ನಿರ್ದೇಶಕರದ್ದು ಒಂದು ಶೈಲಿಯಾದರೆ, ಎಲ್ಲಾ ಓದಿಕೊಂಡು ಸಿನಿಮಾ ಮಾಡುವ ಹುಚ್ಚಿನಲ್ಲಿ, ಸುಮ್ಮನೆ ’ನಮ್ಮದೂ ಒಂದು ಇರಲಿ’ ಎಂದು ಸಿನಿಮಾ ಮಾಡುವವರು ಒಂದಷ್ಟು ಮಂದಿ, ಮತ್ತೆ ಕೆಲವರು ಎಲ್ಲರೊಟ್ಟಿಗೆ ಕೆಲಸವು ಮಾಡಿ, ತಕ್ಕಮಟ್ಟಿಗೆ ಓದಿಕೊಂಡು ಜನರ ನಾಡಿ ಮಿಡಿತವನ್ನು ತಿಳಿದು, ಸಿನಿಮಾ ಮಾಡುವವರದ್ದು ಒಂದು ಶೈಲಿ. ಹೀಗೆ ಕನ್ನಡ ಸಿನಿಮಾ ಹರಿದು ಹಂಚಿ ಹೋಗಿದೆ.
ಈ ಚಿತ್ರದ ನಿರ್ದೇಶಕರು ತುಂಬಾ ಓದಿಕೊಂಡು, ’ಮುಂಗಾರು ಮಳೆ’ಯಿಂದ ತಮ್ಮದೇ ಚಾಪನ್ನು ಮೂಡಿಸಿರುವ ’ಪ್ರೀತಮ್’ ಅದೇಕೋ ತಮ್ಮ ಚಿತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಇದೊಂದು ಕಾಮಿಡಿ ಕಮ್ ಲವ್ ಸ್ಟೊರಿ ಎಂದು ಹೇಳಬಹುದಾದರೂ ಹೆಚ್ಚಿಗೆ ಕಾಮಿಡಿ ಇಲ್ಲ. ಲವ್ ಸ್ವಲ್ಪ ಮಟ್ಟಿಗೆ. ಅನವಶ್ಯಕ ಕತೆಯ ಎಳೆತ, ಟಾಕೀಸಿನಲ್ಲಿ ಕೂತ ಜನರು ಮುಖ-ಮುಖ ನೋಡಿಕೊಂಡು ಕೂರುವ ಪರಿಸ್ಥತಿ ಎದುರಾಗುತ್ತದೆ. ಸಿನಿಮಾ ಮುಕ್ಕಾಲು ಭಾಗ ಮಲೇಷ್ಯಾದಲ್ಲಿ ಓಡುತ್ತದೆ. ಅದೇನೋ ಗೊತ್ತಿಲ್ಲ ಇತ್ತೀಚಿನ ಎಲ್ಲಾ ಸಿನಿಮಾಗಳು ವಿದೇಶದಲ್ಲೇ ಶೂಟ್ ಮಾಡಲಾಗುತ್ತಿದೆ. ಅವಶ್ಯಕತೆ ಇಲ್ಲವೆನಿಸಿದರೂ ಕಥೆ ಅಲ್ಲೇ ಓಡುತ್ತದೆ.
ಕಥೆ ಏನೆಂದರೆ, ಅಂತಾ ಕ್ಯೂರಿಯಸ್ಸೇನು ಇಲ್ಲ. ಒಬ್ಬ ಶೆಟ್ಟಿ (ವಿನಾಯಕ್ ಜೋಷಿ), ಮತ್ತೊಬ್ಬ ಸ್ಲಮ್ ಯೋಗಿ(ಕೃಷ್ಣನಾಗಪ್ಪ), ಇನ್ನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಪ್ರೀತಮ್(ಲಿಖಿತ್ಶೆಟ್ಟಿ). ಹೀಗೆ ಮೂರು ಜನರ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದ ಗೆಳೆಯರು. ಪ್ರೀತಮ್ ತನ್ನ ಪ್ರೇಮಕತೆಯನ್ನು ಇಬ್ಬರು ಹುಡುಗರ ಬಳಿ ಹೇಳಿ, ಆಕೆ ಮಲೇಷ್ಯಕೆ ಹೋಗಿರುವುದಾಗಿ ಹೇಳುತ್ತಾನೆ. ಅವಳಿಗೆ ಪ್ರಪೋಸ್ ಮಾಡಿಸಲು ಹಾಗು ’ಫ್ರೀ’ಯಾಗಿ ಫಾರಿನ್ ಟ್ರಿಪ್ ಮಾಡಿಕೊಂಡು ಬರಲು ಶೆಟ್ಟಿ ಮತ್ತು ಯೋಗಿ ಸ್ಕೆಚ್ಚ್ ಹಾಕಿ ಪ್ರೀತಮ್ನನ್ನು ಕುರಿ ಮಾಡುತ್ತಾರೆ. ಅಲ್ಲಿ ಪ್ರೀತಮ್ ಪ್ರೇಮಕ್ಕಿಂತ ಈ ಇಬ್ಬರೂ ಒಂದೊಂದು ಹುಡುಗಿಯನ್ನು ಪ್ರೇಮಿಸುತ್ತಾರೆ. ಹೀಗೆ ಸಾಗುವ ಕತೆಯಲ್ಲಿ ಮುಕ್ಕಾಲು ಭಾಗ ಪರಸ್ಪರ ಕಾಲೆಳೆದಾಟ ಸಾಗುತ್ತದೆ. ಒಟ್ಟಾರೆ ಕತೆಯಲ್ಲಿ ಏನಾಗುತ್ತೆ..? ಪ್ರೀತಮ್ ಪ್ರೇಮ ಸಫಲವಾಗುತ್ತಾ..? ಈ ಇಬ್ಬರ ಪ್ರಿಯತಮೆಯರು ಅವರಿಗೆ ಸಿಗುತ್ತಾರಾ..? ಎಂಬುದೇ.. ಕಥೆಯ ಸಸ್ಪೆನ್ಸ್.
ಅಂತಾ ಕ್ಯೂರಿಯಸ್ಸ್ ಅನ್ನಿಸುವುದಿಲ್ಲ, ಕೆಲವು ಕಡೆ ಲ್ಯಾಗಿಂಗ್ ಇದೆ. ನವಿರಾದ ಪ್ರೇಮಕತೆ ಇದೆಯಾ..? ಎಂದರೆ, ಅದೂ ಮನ ತಟುವುದಿಲ್ಲ. ಕತೆಯ ಸೀನ್ ಬೋರಿಗಂಗ್ ಎನ್ನಿಸಿದಾಗ ಹಾಡುಗಳಾದರೂ ಮುದ ನೀಡುತ್ತವಾ..? ಎಂದರೆ, ಅದೂ ಇಲ್ಲ. ಸುಮ್ಮನೆ ನೋಡುಗರಿಗೆ ಮಲೇಷಿಯಾ ತೋರಿಸಿಕೊಂಡು ಬಂದ ಹಾಗೆ ಕಾಣುತ್ತದೆ. ಸಿನಿಮಾ ನೋಡಿದ ತೃಪ್ತಿ ಸಿಗುವುದಿಲ್ಲ.
ಪ್ರೀತಮ್ ಗುಬ್ಬಿ ಇಲ್ಲಿ ತಮ್ಮ ಕ್ಯಾರೆಕ್ಟರ್ಗಳ ವಿಷಯದಲ್ಲಿ ಗೆದ್ದಿದ್ದಾರೆ. ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಕೃಷ್ಣನಾಗಪ್ಪ, ವಿನಾಯಿಕ ಜೋಷಿ, ಮಿಲನ್ ಚೆಂದಾಗಿ ಅಭಿನಯಿಸಿದ್ದಾರೆ. ಲಿಖಿತ್ ಇನ್ನೂ ಪಾಲಿಶ್ ಆಗಬೇಕಾಗಿದೆ. ಪದ್ಮಜಾರಾವ್ ಹೊಸರೀತಿಯ ಗೆಟಪ್ಪ್ ಗುಡ್. ರಂಗಾಯಣ ರಘು ,ಸಾಧು ಕಾಮಿಡಿ ವೇಸ್ಟ್. ಅವೆರಡೂ ಪಾತ್ರಗಳು ಸುಮ್ಮನೆ ಬಂದು ಹೋಗುತ್ತದೆ.
ಮಿಕ್ಕಂತೆ ಕ್ಯಾಮರಾ ತಮ್ಮ ಕೆಲಸಕ್ಕೆ ಮೋಸಮಾಡಿಲ್ಲ. ಸಂಗೀತ ವೇಸ್ಟ್. ದೀಪು, ರವಿವರ್ಮ, ತಮ್ಮ ಕೆಲಸ ತಾವು ಮಾಡಿದ್ದಾರೆ.
ಸಿನಿಮಾ ನೋಡಲು ಸ್ಪಲ್ಪ ತಾಳ್ಮೆ ತೆಗೆದುಕೊಡು ಹೋದರೆ, ಅರೆಬೆಂದ ಹೋಳಿಗೆ ನಿಮ್ಮ ಬಾಯಿಗೆ ಸವಿ ನೀಡಬಹುದು.
ವರದಿ: ನಟರಾಜ್ ಎಸ್. ಭಟ್