ಆಟಿ ಹೊಸಿಲಲ್ಲಿ - ’ಆಟಿಕಳೆಂಜ’
ತುಳು ಸಂಸ್ಕ್ರತಿಯ ತವರು ಕರಾವಳಿ. ಇಲ್ಲಿ ಆಚರಣೆಗಳಿಗೇನು ಬರವಿಲ್ಲ. ತುಳುವರು ತಮ್ಮದೇ ಆದ ಹನ್ನೆರಡು ತಿಂಗಳುಗಳನ್ನು ಹೊಂದಿದ್ದು ಇದರಲ್ಲಿ ’ಆಟಿ’ ಕೂಡ ಒಂದು. ತುಳವರ ಪ್ರಕಾರ ಇದು ಸಮೃದ್ಧಿಯ ತಿಂಗಳಲ್ಲ. ನಿಸರ್ಗವು ತೀವ್ರ ಮಳೆಯೊಂದಿಗೆ ಮುನಿಸಿ ಕೋಂಡಿರುವಂತೆ ಗೋಚರವಾಗುತ್ತದೆ.ಆಟಿಯಲ್ಲಿ ಸಾಯುವಾತ ಸ್ವರ್ಗವಾಸಿ ಎನಿಸಿಕೊಳ್ಳಲಾರ ಎಂದು ಕರಾವಳಿ ಜನ ಹೇಳುತ್ತಾರೆ.
ಇದು ಮಳೆಗಾಲವಾದ್ದರಿಂದ ಕೃಷಿಜನರಿಗೆ ಹೊರಗಿನ ಓಡಾಟ ಅಷ್ಟಕ್ಕಷ್ಟೆ. ಹೊರಗೆ ಮಳೆರಾಯನ ಅಬ್ಬರದಿಂದ ಓಡಾಡಲಾರದ ಜನ ಮೊಳೆಹೊಡೆದಂತೆ ಮನೆಯಲ್ಲೇ ಕೂರುತ್ತಾರೆ. ಮಳೆ ವಿಪರೀತ ವಾಗಿರುವುದರಿಂದ ಆಟಿ ರೋಗ ರುಜಿನಗಳ ಅವಧಿ. ಆದರೆ ಈ ತಿಂಗಳಲ್ಲಿ ಜನ ತಮ್ಮ ಕಷ್ಟ ಕಾರ್ಪಣ್ಯಗಳ ಈಡೇರಿಕೆಗಾಗಿ ತುಳುವರ ದೈವವಾದ ಆಟಿಕಳೆಂಜನ ಮೊರೆ ಹೋಗುತ್ತಾರೆ. ಆಟಿತಿಂಗಳಲ್ಲಿ ದೈವ ದೇವರುಗಳ ಕಾರ್ಯ,ಮದುವೆ ಮುಂತಾದಗಳು ನಿಷಿಧ್ಧ. ಅಲ್ಲದೆ ಇಲ್ಲಿ ಜನ ತಮ್ಮ ದೈವಾಧೀನರಾದ ಹಿರಿಯರಿಗೆ ”ಆಟಿ ಬಲಸುನೆ”(ಆಟಿಯಲ್ಲಿ ಬಡಿಸುವುದು) ಎಂಬ ಕಾರ್ಯವನ್ನು ನೆರವೇರಿಸುತ್ತಾರೆ.ಆಟಿ ತಿಂಗಳು ನವವಧುವನ್ನು ಹೆತ್ತವರು ಆಟಿಕೂರಿಸಲು ಗಂಡನಮನೆಯಿಂದ ತವರಿಗೆ ಕರೆದಕೊಂಡು ಬರುತ್ತಾರೆ.
ಆಡಿ ಸಂಕ್ರಮಣ ಕಳೆದು ಮೂರುದಿನವಾದ ನಂತರ ಮನೆ ಮನೆಗೆ ಬರುವ ದೈವ ಆಟಿಕಳೆಂಜ ’ಅಜಲಾಯ’ ಜನಾಂಗದ ಜನರುಗಳು ಈ ದೈವವನ್ನು ಪ್ರತಿನಿಧಿಸಿ ನರ್ತಿಸುವವರು. ಇಲ್ಲಿ ತೆಂಬರೆ ಎಂಬ ಸಾಧನವನ್ನು ’ಅಜಲಾಯನ’ ಜನಾಂಗಕ್ಕೆ ಸೇರಿದ ಹೆಣ್ಣು ಬಾರಿಸಬೇಕು. ಈ ಸಾಧನದ ತಾಳಕ್ಕೆ ತಕ್ಕಂತೆ ದೈವವು ನರ್ತಿಸುತ್ತದೆ.ಆಟಿಕಳೆಂಜ ತುಳು ನಾಡಿನ ಕಷ್ಟ ನೀಗಿಸುವ ’ಮಾಯೋದ ರಾಜಕುಮಾರೆ’ ಎಂದು ಇಂದಿಗೂ-ತುಳುಜನ ನಂಬಿದ್ದಾರೆ. ಆಟಿಕಳೆಂಜ ತೆಂಗಿನಗರಿ ಇಂದ ಮಾಡಿದ ವಸ್ತ್ರವನ್ನು ಹೋದೆದು ಕೋಂಡಿರುತ್ತಾನೆ. ಅಲ್ಲದೆ ಕೇಪುಳ ಹೂವಿನ ಮಾಲೆಯನ್ನು ತಲೆಗೂ, ತೋಳಿಗೂ ಸುತ್ತಿರುತ್ತಾನೆ, ಕಾಲಲ್ಲಿ ಗೆಜ್ಜೆ ಇರುತ್ತದೆ. ಕೈಯಲ್ಲಿ ಮರದ ಛತ್ರಿ, ಹಾಗು ಕೊಲನ್ನು ಹಿಡಿದು ಕೊಂಡು ಇರುವ ದೈವ ದನಗಳ ಪರಂಗಿ ರೋಗ,ಕಾಲು ಕುಂಟು ರೋಗ, ಭತ್ತಕ್ಕೆ ಬರುವ ಎಲ್ಲಾ ರೋಗಗಳ ನಿವಾರಣೆ ಕಾರ್ಯ ಕೈಗೋಳ್ಳುವುದು ಎಂದು ಜನರು ನಂಬುತ್ತಾರೆ.
ಆಟಿಕಳೆಂಜ ಈ ರೋಗಗಳ ನಿವಾರಣೆಯ ಗುರಿಹೊಂದಿ ಅರಸಿನ ಮಸಿ ಮಿಶ್ರಿತ ನೀರನ್ನು ದನ ಕೊಟ್ಟಿಗೆಗೆ, ಭತ್ತಗಳ ಗದ್ದೆಗೆ ತನ್ನ ಕೈಯಾರ ಸಿಂಪಡಿಸಿ ಬಿಟ್ಟು ರೋಗ ನಿವಾರಿಸುತ್ತಾನೆ. ಮನೆ-ಮನೆಗೆ ಭೇಟಿನೀಡುವ ನೀಡುವ ಆಟಿಕಳೆಂಜ ಎರಡು ಅಥವಾ ಮೂರು ಜನರೊಗೂಡಿ ಆಗಮಿಸುತ್ತಾನೆ. ಆವೇಳೆ ಆತನಿಗೆ ಪುಡಿ ಭತ್ತದ ಕಾಳು, ಹಲಸಿನ ಬೀಜ, ತೆಂಗಿನಕಾಯಿ, ಮೆಣಸು, ಉಪ್ಪು ಮೊದಲಾದವನ್ನು ನೀಡುವುದು ವಾಡಿಕೆ. ಇದನ್ನು ಪಡೆದ ಕಳೆಂಜ ಮನಸಾರೆ ಹರಸಿ ತೆರಳುತ್ತಾನೆ. ಆಟಿಕಳೆಂಜ ಬರುವ ಸಮಯದಲ್ಲಿ ಜನರು ಹೆಚ್ಚಾಗಿ ಮನೆಯಲ್ಲೇ ಇರುತ್ತಾರೆ. ಆಟಿಕಳೆಂಜನ ಆಗಮನ ಮನೆಯವರಿಗಲ್ಲಾ ಸಂತಸ ತಂದರೆ ಮನೆಯ ಪುಟಾಣೆ ಮಕ್ಕಳು ಮಾತ್ರ ಕಳೆಂಜನ ಹಳದಿ ಮಿಶ್ರಿತ ಕಪ್ಪು ಮುಖಕಂಡು ಗಾಬರಿಯಾಗಿ ಅಳುತ್ತವೆ.
ಆಟಿ ಎಂಬುದು ತುಳುವರ ಆಚರಣೆಗಳಿಗೆ, ಸಂಸ್ಕ್ರತಿಗೆ ಒಂದು ವೇದಿಕೆ ಈ ವೇಳೆ ಕರಾವಳಿಗೆ ಕರಾವಳಿಯೇ ತನ್ನ ಆಚರಣೆಯ ವೈಭವದಲ್ಲಿ ತೊಡಗಿರುತ್ತದೆ. ಈ ವೇಳೆ ಜನರು ಬಿಡುವಿನಿಂದ ಇರುವುದರಿಂದ ಹಲವಾರು ಆಟದಲ್ಲಿ ತೊಡಗುತ್ತಾರೆ. ಚೆನ್ನೆಮಣೆ, ಅಪ್ಪಂಗಾಯಿ ಮೊದಲಾದ ಆಟಗಳು ವಿಶೇಷ ಆದರೆ ಇಂದಿನಂತೆ ಜನರು ತೀರಾ ಕ್ರಿಯಾ ಶೀಲರಾಗಿ ಇಲ್ಲದಿದ್ದುದರಿಂದ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದರು ಆದರೆ ಇಂದಿನ ಜನ ತಮ್ಮ ಸಮಯದ ಅಭಾವದ ಮಧ್ಯೆ ಇಂಥಾ ಆಟಗಳನ್ನು ಮರೆತು ಹೋಗುತ್ತಿರುವುದು ಖೇದಕರ.
ಆಟಿಯ ಮೆರುಗು ಇರುವುದು ಮುಖ್ಯವಾಗಿ ಕರಾವಳಿ ಜನರು ಮಾಡಿತಿನ್ನುವ ತಿನಿಸುಗಳಲ್ಲಿ ಆಟಿ ಅಮವಾಸ್ಯೆಯ ದಿನ ಬೆಳಗಾಗುವ ಮುನ್ನವೇ ಮನೆಯ ಪುರುಷರು ಕಾಡಿನಂತ ಜಾಗದಲ್ಲಿ ಬೆಳೆದ ಹಾಲೆಯ ಕೆತ್ತೆಯನ್ನು ಕಡಿದು ತಂದು ಅವುಗಳನ್ನು ಜಜ್ಜಿ ರಸತೆಗೆದು ತಿಂಡಿತಿನಿಸುಗಳಲ್ಲಿ ಬೆರೆಸಿ ಸೇವಿಸುತ್ತಾರೆ. ಇದು ರೋಗನಿರೋಧಕ ಶಕ್ತಿಹೊಂದಿರುವ ಉತ್ತಮ ಮೂಲಿಕೆಯಾಗಿರುತ್ತದೆ. ಅಲ್ಲದೆ ಆಟಿ ಅಮವಾಸ್ಯೆಯ ದಿನ ಕಳ್ಳಿ ಗಿಡವನ್ನು ಗದ್ದೆಗೆ ಹಾಕಲಾಗುತ್ತದೆ. ಇಲ್ಲಿ ’ಬಲಿಯೇಂದ್ರ ತನ್ನ ಆಳನ್ನು ಭೂಮಿಯ ಹೊಲ ಗದ್ದೆಯನ್ನು ನೋಡಿ ಬರಲು ಕಖುಹಿಸುತ್ತಾನೆ’ ಎಂಬ ಪ್ರತೀತಿ ಇದೆ. ಇದಲ್ಲದೆ ಆಟಿ ತಿಂಗಳಲ್ಲಿ ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ,ಮಾವಿನ ಕಾಯಿ, ಮಾಂಬಳ, ಸೆಂಡಿಗೆ, ಹಪ್ಪಳ, ಕೆಸುವಿನ ಸಾರು, ಪತ್ರೊಡೆ ಬ್ರಾಹ್ಮಿ ಎಲೆಯ ತಿನಿಸು ಮೊದಲಾದುವುದರ ವೈವಿಧ್ಯಮಯ ರೀತಿಯ ಭಕ್ಷ್ಯತಯಾರಿಸಿ ತಿನ್ನುತ್ತಾರೆ. ವೈಜ್ಞಾನಿಕವಾಗಿ ಹರಿಸಿದರೆ ಇವೆಲ್ಲಾ ಆರೋಗ್ಯವರ್ಧಕವಾದಂತಹ ತಿನಿಸುಗಳು.
ಆಧುನಿಕತೆಯ ಭರಾಟೆಯ ನಡುವೆ ಇಂದು ಕರಾವಳಿಯಲ್ಲಿನ ತುಂಬು ಕುಟುಂಬಗಳು ಕಣ್ಮರೆಯಾಗುತ್ತಿವೆ ಇದರ ಪರಿಣಾಮವೆಂಬಂತೆ ಆಚರಣೆಗಳು ಜನರ ಮನದ ಮೂಲೆ ಸೇರುತ್ತಿವೆ ಇವೆಲ್ಲವನ್ನೂ ಒಳಿಸಿ ಬೆಳೆಸುವ ಕಾರ್ಯನಡೆದಾಗ ಆಟಿ ಆಚರಣೆಗಳು ಬೆಳೆದು ಬರಲ್ಲ ಸಾಧ್ಯ.
Author :