ಬೆಂಗಳೂರು : ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತವಾದ, ಏಕಮೇವ ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ಶ್ರೀ ರಾಮಚಂದ್ರಾಪುರ ಮಠವು ಸಾವಿರಾರು ವರ್ಷಗಳಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಬರುತ್ತಿದ್ದು, ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಧರ್ಮಸಂರಕ್ಷಣೆಯ ಜೊತೆಗೆ ಗೋಸಂರಕ್ಷಣೆ, ವಿದ್ಯಾಸಹಾಯ, ವಿದ್ಯಾದಾನ, ಆರ್ತಸಹಾಯ ಮುಂತಾದ ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡಿದೆ.
ನ್ಯಾಯ-ಧರ್ಮದ ಪಥದಲ್ಲಿ ಶ್ರೀ ರಾಮಚಂದ್ರಾಪುರ ಮಠವಿದ್ದು, ಸಮರ್ಥವಾದ ಆಡಳಿತ ವ್ಯವಸ್ಥೆಯನ್ನೂ ಹೊಂದಿದೆ. ಇಂತಹ ಧಾರ್ಮಿಕ ಶ್ರದ್ಧಾಕೇಂದ್ರದ ಮೇಲೆ ಸರ್ಕಾರವು ಅನಗತ್ಯವಾಗಿ ಹಸ್ತಕ್ಷೇಪಕ್ಕೆ ಮುಂದಾಗಿರುವುದು ಹವ್ಯಕ ಸಮಾಜ ಸೇರಿದಂತೆ ಲಕ್ಷಾಂತರ ಜನರ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ. ಶ್ರೀಮಠದ ಮೇಲಾಗುತ್ತಿರುವ ಇಂತಹಾ ಆಕ್ರಮಣಗಳನ್ನು, ಅನ್ಯಾಯವನ್ನು ವಿರೋಧಿಸಿ ಅಕ್ಟೋಬರ 8 ಶನಿವಾರ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ 'ಶಪಥಪರ್ವ' ಸಮಾವೇಶ ನಡೆಯಲಿದ್ದು, ಮೌನ ಪ್ರತಿಭಟನೆ ಹಾಗೂ ಉಪವಾಸದ ಮೂಲಕ ಮಠದ ಮೇಲಾಗುತ್ತಿರುವ ಅನಾಚಾರವನ್ನು ಪ್ರತಿಭಟಿಸಲಾಗುವುದು.
'ಶಪಥಪರ್ವ' ಸಮಾವೇಶಕ್ಕೆ ಶ್ರೀ ಅಖಿಲ ಹವ್ಯಕ ಮಹಾಸಭಾದ ಸಂಪೂರ್ಣ ಬೆಂಬಲವಿದ್ದು, ಧಾರ್ಮಿಕ ಶ್ರದ್ಧಾಕೇಂದ್ರದ ಮೇಲಾಗುತ್ತಿರುವ ಅನ್ಯಾಯವನ್ನು 'ಶಪಥಪರ್ವ' ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ಜನತೆ ತೀವ್ರ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಮನವಿ ಮಾಡಿದ್ದಾರೆ.