Untitled Document
Sign Up | Login    
Dynamic website and Portals
  
September 26, 2016

ಬತ್ತಿದ ಹೇಮಾವತಿ ಅಚ್ಚಕಟ್ಟು ಪ್ರದೇಶ: ಒಣಗಿದ ಬೆಳೆ

ಬತ್ತಿದ ಹೇಮಾವತಿ ಅಚ್ಚಕಟ್ಟು ಪ್ರದೇಶ: ಒಣಗಿದ ಬೆಳೆ

ಬೆಂಗಳೂರು : ಕಾವೇರಿ ಕೊಳ್ಳದ ಪ್ರದೇಶದಲ್ಲಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಕಾವೇರಿ ನೀರಾವರಿ ನಿಗಮ ನಿಯಮಿತವು ಮಾಧ್ಯಮದವರಿಗಾಗಿ ಅಧ್ಯಯನ ಪ್ರವಾಸವನ್ನು ಆಯೋಜಿಸಿದ್ದು, ಬೆಂಗಳೂರಿನಿಂದ ಆಗಮಿಸಿದ ಮಾಧ್ಯಮ ತಂಡ ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಕಂಡ ವಾಸ್ತವ ಚಿತ್ರಣವಿಲ್ಲಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಪಟ್ಟಣದ ಕೆರೆಗೆ ನೀರು ಹರಿಸಿ ಎರಡು ವರ್ಷಗಳೇ ಕಳೆದಿವೆ. ಮಳೆ ಇಲ್ಲದೆ ಒಣಗಿ ಹೋಗಿರುವ ಕೆರೆ ಬರಡು ಭೂಮಿಯಂತಾಗಿದೆ. ಈ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ರೈತರು ಜೋಳ, ರಾಗಿಯಂತಹ ಅರೆ-ಮಿಶ್ರಿತ ಬೆಳೆ ಬೆಳೆಯಲೂ ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಇಡೀ ಅಚ್ಚಕಟ್ಟು ಪ್ರದೇಶವೇ ಒಣಗಿಹೋಗಿದೆ.

ಹೇಮಾವತಿ ವಿಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಶೂನ್ಯ. ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯಾಪ್ತಿಯ 176 ಕೆರೆಗಳ ಪೈಕಿ 155 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಅಲ್ಲದೆ, 21 ಕೆರೆಗಳಲ್ಲಿ ನೀರಿನ ಮಟ್ಟ ಶೇಕಡಾ 50 ಕ್ಕೂ ಕಡಿಮೆ ಪ್ರಮಾಣದಲ್ಲಿದೆ. ಇಲ್ಲಿ ಲಭ್ಯವಿರುವ ನೀರನ್ನು ಬಹು ಗ್ರಾಮ ಕುಡಿಯುವ ನೀರು ಪೂರೈಕೆಗೆ ಮೀಸಲಿರಿಸಲಾಗಿದೆ ಎಂದು ನಿಗಮದ ಮುಖ್ಯ ಅಭಿಯಂತರ ಕೆ ಬಾಲಕೃಷ್ಣ ಹೇಳುತ್ತಾರೆ.

ಪ್ರಸಕ್ತ ಸಾಲಿನಲ್ಲಿ ಹೇಮಾವತಿ ನದಿ ನೀರು ಆಧರಿಸಿ ಬೆಳೆ ಬೆಳೆಯದಿರಿ ಎಂದು ರೈತರಿಗೆ ಸಲಹೆ ನೀಡಲಾಗಿದೆ. ಸ್ವಂತ ಭೂಮಿ ಇರುವ ಸಣ್ಣ ಹಿಡುವಳಿದಾರರೂ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗದೆ ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಗುಬ್ಬಿ ತಾಲ್ಲೂಕಿನ ಕಿಟ್ಟದ ಕುಪ್ಪೆ ಗ್ರಾಮದಲ್ಲಿ ವಿತರಣಾ ಕಾಲುವೆ ಬದಿಯಲ್ಲೇ ಇರುವ ಜಮೀನಿನಲ್ಲೂ ರಾಗಿ ಮತ್ತು ಜೋಳದ ಬೆಳೆಗಳು ವಿಫಲವಾಗಿವೆ. ಸಮೀಪದಲ್ಲೇ ಇರುವ ಹೊದಲೂರು ಕೆರೆ ಕೂಡಾ ಮೈದಾನದಂತಾಗಿದೆ. ಹೊದಲೂರು ಗ್ರಾಮದಲ್ಲಿ ರಾಗಿ ಬೆಳೆಯೂ ನಾಶವಾಗಿದೆ. ಈ ಗ್ರಾಮದಲ್ಲಿನ ಅಂತರ್ಜಲ ಮಟ್ಟ 1500 ಅಡಿಗಳಿಗೂ ಕುಸಿದಿದೆ.

ಹೇಮಾವತಿಯ 240 ಕಿ ಮೀ ಉದ್ದದ ತುಮಕೂರು ನಾಲಾ ವ್ಯಾಪ್ತಿಯಲ್ಲಿ 2.37 ಲಕ್ಷ ಎಕರೆ ಅಚ್ಚಕಟ್ಟು ಪ್ರದೇಶಕ್ಕೆ ನೀರುಣಿಸಿ ರೈತರ ಬಾಳು ಬೆಳಗುತ್ತಿದ್ದ ಈ ನಾಲೆ ಕಳೆದ ಎರಡು ವರ್ಷಗಳಲ್ಲಿ ರೈತನಿಗೆ ಕರುಣೆ ತೋರದೆ ಆಂತಕದ ವಾತಾವರಣವನ್ನೇ ಸೃಷ್ಠಿಸಿದೆ. ಲಭ್ಯವಿರುವ ನೀರು ಕುಡಿಯುವ ಉದ್ದೇಶಕ್ಕಾಗಿ ಡಿಸೆಂಬರ್ ಅಂತ್ಯದವರೆಗೆ ಮಾತ್ರ ಬಳಕೆಗೆ ದೊರೆಯಬಹುದು. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣ ಎದುರಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಹೇಮಾವತಿ ನದಿಯ ಉಪ ನದಿ ಯಗಚಿ. ಆಲೂರು, ಬೇಲೂರು ಹಾಗೂ ಹಾಸನ ತಾಲ್ಲೂಕುಗಳಲ್ಲಿನ 37,000 ಎಕರೆ ಪ್ರದೇಶಕ್ಕೆ ನೀರಾವರಿಗೆ ನೀರು ಒದಗಿಸಲು ಬೇಲೂರಿನ ಬಂಟೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕ ಬ್ಯಾಡಗೆರೆ ಗ್ರಾಮದಲ್ಲಿ 2003 ರಲ್ಲಿ ನಿರ್ಮಿಸಿದ ಯಗಚಿ ಜಲಾಶಯವು ಈ ಬಾರಿ ನೀರಿಲ್ಲದೆ ತನ್ನ ಮೂಲ ಉದ್ದೇಶವನ್ನೇ ಮೊಗಚಿ ಹಾಕಿದೆ.

ನಿರ್ಮಾಣವಾದ ದಿನದಿಂದ ಈವರೆಗಿನ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಯಗಚಿ ಜಲಾಶಯದಲ್ಲಿನ ಗರಿಷ್ಠ ಒಳ ಹರಿವು 400 ಕ್ಯೂಸೆಕ್ಸ್ ಇತ್ತು. ಆದರೆ, ಈ ಸಾಲಿನಲ್ಲಿ ಶೇಕಡಾ ಐದರಷ್ಟು ಅತ್ಯಂತ ಕಡಿಮೆ ಒಳ ಹರಿವು ಅಂದರೆ ಕೇವಲ 20 ಕ್ಯೂಸೆಕ್ಸ್ ದಾಖಲಾಗಿರುವುದು ನಿಜವಾಗಲೂ ದುರದೃಷ್ಠಕರ ದಾಖಲೆಯಾಗಿದೆ.

ಕಳೆದ ಬಾರಿ ಜೂನ್ ತಿಂಗಳಲ್ಲೇ ಭರ್ತಿಯಾಗಿದ್ದ ಯಗಚಿ ಜಲಾಶಯವು ಈ ಬಾರಿ ಸೆಪ್ಟೆಂಬರ್ ಅಂತ್ಯ ತಲುಪಿದರೂ ನೀರು ಬಾರದೆ ಸಂಪೂರ್ಣ ಬರಿದಾಗಿದೆ. ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಅರೆ ಮಿಶ್ರಿತ ಬೆಳೆಗೆ ನೀರು ಒದಗಿಸಲಾಗದೆ ಇಲ್ಲಿನ ನೀರಾವರಿ ಸಲಹಾ ಸಮಿತಿಯು ಕೃಷಿ ಚಟುವಟಿಕೆಗಳಿಗೆ ರಜೆ ಘೋಷಿಸಿದೆ. ಜಲಾಶಯವಿರುವ ಚಿಕ್ಕಬ್ಯಾಡಗೆರೆ ಗ್ರಾಮಕ್ಕೂ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ. ರಂಗಸ್ವಾಮಿ ತಿಳಿಸಿದ್ದಾರೆ.

ಯಗಚಿ ಜಲಾಶಯದ ನೀರಿನ ಸಂಗ್ರಹ ಸಾಮಥ್ರ್ಯ 3.603 ಟಿ ಎಂ ಸಿ. ಪ್ರಸ್ತುತ ಲಭ್ಯವಿರುವ ನೀರು 1.577 ಟಿ ಎಂ ಸಿ. ಬಳಕೆಗೆ ಯೋಗ್ಯವಿರುವ ನೀರು 1.213 ಟಿ ಎಂ ಸಿ. ಬಳಕೆಗೆ ಯೋಗ್ಯವಲ್ಲದ ನೀರಿನ ಪ್ರಮಾಣ 0.364 ಟಿ ಎಂ ಸಿ. ಬೇಲೂರು ತಾಲ್ಲೂಕಿನಲ್ಲಿ ಸರಾಸರಿ ವಾಡಿಕೆ ಮಳೆ ಸೆಪ್ಟೆಂಬರ್ ಅಂತ್ಯದವರೆಗೆ 787 ಮಿಲಿ ಮೀಟರ್. ಪ್ರಸಕ್ತ ಸಾಲಿನಲ್ಲಿನ ಮಳೆಯ ಪ್ರಮಾಣ 377.6 ಮಿಲಿ ಮೀಟರ್. ಅಂದರೆ ಈ ಸಾಲಿನಲ್ಲಿನ ಮಳೆಯ ಕೊರತೆ ಪ್ರಮಾಣ ಶೇಕಡಾ 47.97. ನಮ್ಮ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ, ಕುಡಿಯಲು ನೀರೂ ಒದಗಿಸಲಾಗದಂತಹ ಪರಿಸ್ಥಿತಿಯಲ್ಲಿ ರಾಜ್ಯವಿರುವಾಗ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಹರಿಸಲು ಹೇಗೆ ಸಾಧ್ಯ...

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited