ಜಿನೀವಾ : ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಬಲೂಚಿಸ್ತಾನ ವಿಚಾರವನ್ನು ಪ್ರಸ್ತಾಪಮಾಡಿರುವ ಭಾರತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನದ ನಡೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನದಲ್ಲಿ ಮಾತನಾಡಿದ ಜಿನೀವಾ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಅಜಿತ್ ಕುಮಾರ್,ಬಲೂಚಿಸ್ತಾನದಲ್ಲಿ ವ್ಯಾಪಕವಾಗಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಕಾಶ್ಮೀರದಲ್ಲಿ ಇಂದಿಗೂ ಹಿಂಸಾಚಾರ ಮುಂದುವರೆದಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಯೋತ್ಪಾದನಾ ಉತ್ಪಾದಕ ಕೇಂದ್ರವಾಗಿ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮ ದಾಳಿ ನಡೆಸುತ್ತಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಮಾನವ ಹಕ್ಕುಗಳ ಉಲ್ಲಂಘನೆ, ಭಯೋತ್ಪಾದಕರಿಗೆ ಆಶ್ರಯ, ಜಮ್ಮು ಮತ್ತು ಕಾಶ್ಮೀರ ವಿಚಾರ ಸಂಬಂಧ ನೀಡಲಾಗಿರುವ ವೇದಿಕೆ ದುರುಪಯೋಗ ಸೇರಿದಂತೆ ಪಾಕ್ ಹಲವು ದುಷ್ಕೃತ್ಯ ನಡೆಸುತ್ತಿದ್ದು, ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ಬಿಡುವಂತೆ ಪಾಕ್ ಗೆ ಹಲವು ರಾಷ್ಟ್ರಗಳು ಮನವಿ ಮಾಡಿದರೂ ಪಾಕಿಸ್ತಾನ ಮಾತ್ರ ವಿಷಯ ಗಂಭೀರತೆ ಅರಿಯದೇ ಉದ್ಧಟತನ ಮುದುವರೆಸಿದೆ ಎಂದು ವಾಗ್ದಾಳಿ ನಡೆಸಿದರು.