ಬೆಂಗಳೂರು : ರಿಯೋ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿ ಭಾರತಕ್ಕೆ ಹೆಮ್ಮೆ ತಂದುಕೊಟ್ಟ ಪಿ.ವಿ ಸಿಂಧು, ಕೋಚ್ ಪದ್ಮಭೂಷಣ ಗೋಪೀಚಂದ್ ಶ್ರೀರಾಮಚಂದ್ರಾಪುರಮಠಕ್ಕೆ ಕುಟುಂಬ ಸಹಿತರಾಗಿ ಆಗಮಿಸಿ ಶ್ರೀಸಂಸ್ಥಾನದವರಿಂದ ಅನುಗ್ರಹ ಪಡೆದರು.
ದೇಶಕ್ಕೆ ಗೌರವ ತಂದುಕೊಟ್ಟವರು ಶ್ರೀಮಠಕ್ಕೆ ಆಗಮಿಸಿರುವುದು ಸಂತಸದ ವಿಚಾರ, ಇವರುಗಳಲ್ಲಿರುವ ಸರಳತೆ, ವಿನಯ ಶ್ಲಾಘನೀಯ. ಸಿಂಧು, ಗೋಪೀಚಂದ್, ಅರವಿಂದ್ ಭಟ್ ಇವರು ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ, ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶಿಸಿದರು.
ಈ ವೇಳೆ ಮಾತನಾಡಿದ ಪಿ.ವಿ ಸಿಂಧು, ರಾಘವೇಶ್ವರ ಶ್ರೀಗಳ ಆಶೀರ್ವಾದ ದೊರಕಿದ್ದು ತುಂಬಾ ಖುಷಿ ಆಯಿತು, ಶ್ರೀಗಳ ಆಶೀರ್ವಾದದಿಂದ ಮುಂದೆ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದರು.
ಕ್ರೀಡಾಕೂಟಕ್ಕೆ ತೆರಳುವಾಗ ಪ್ರತಿಬಾರಿಯೂ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೆ, ಶ್ರೀಗಳಿಂದ ಪ್ರೇರಣೆ ಪಡೆದಿದ್ದೇನೆ. ಗೋಸಂಪತ್ತು ಇಂದು ಅವಸಾನದ ಹಾದಿಯಲ್ಲಿದ್ದು, ಗೋವಿನ ಕುರಿತಾಗಿ ಶ್ರೀಮಠದ ಆಂದೋಲನ ಶ್ಲಾಘನೀಯ ಎಂದು ಗೋಪೀಚಂದ್ ತಿಳಿಸಿದರು.
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಹಾಗೂ ಅವಳ ಗುರುಗಳಾದ ಗೋಪೀಚಂದ್ ಅವರಿಗೆ ಶ್ರೀಗಳು ವಿಶೇಷವಾದ ರಾಮಟಂಕೆಯನ್ನು ನೀಡಿ ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿತರುವಂತೆ ಆಶೀರ್ವದಿಸಿದರು.