ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆಯಲ್ಲಿ ಹಾಗೂ ಸರ್ವಪಕ್ಷ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರದಂತೆ ರಾತ್ರಿಯಿಂದಲೇ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದೆ.
ಕೆಆರ್ ಎಸ್ ನಿಂದ ನಿನ್ನೆ ರಾತ್ರಿ ಸುಮಾರು 11 ಸಾವಿರ ಕ್ಯೂಸೆಕ್ ನೀರು ಹರಿದಿದ್ದು, ಕಬಿನಿ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ಹಾಗೂ ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಮೂರೂ ಜಲಾಶಯಗಳಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಹೆಚ್ಚುವರಿ ಭದ್ರತೆ ನಡುವೆ ನೀರು ಹರಿಸಲಾಗುತ್ತಿದೆ
ರಾಜ್ಯ ಸರ್ಕಾರ ನೀರು ಬಿಟ್ಟಿರುವುದನ್ನು ಖಂಡಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಶ್ರೀರಂಗಪಟ್ಟಣದ ಬಳಿ ಇರುವ ವೆಲ್ಲೆಸಿ ಸೇತುವೆ ಬಳಿ ರೈತರು ನದಿಗಿಳಿದು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸುತ್ತಿದ್ದಾರೆ.
ಇದೇ ವೇಳೆ ಮಳವಳ್ಳಿ ತಾಲ್ಲೂಕಿನ ಉಪ್ಪಿನ ಕೆರೆ ಗ್ರಾಮಸ್ಥರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಹೆದ್ದಾರಿ ತಡೆ ನಡೆಸಿದ್ದಾರೆ. ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ರಸ್ತೆಯಲ್ಲೇ ಕುಳಿತು ಗ್ರಾಮಸ್ಥರು ಧರಣಿ ನಡೆಸುತ್ತಿದ್ದು, ಈ ಮಾರ್ಗದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಬೆಂಗಳೂರಿನಿಂದ ಮಂಡ್ಯ, ಮೈಸೂರು, ಚಾಮರಾಜನಗರ ಬಸ್ ಸಂಚಾರ ಸ್ಥಗಿತಗೊಂದಿದೆ.
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ಮುಂದಿನ 10ದಿನಗಳ ವರೆಗೆ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷಗಳ ಸಭೆ ನಡೆಸಿದರು. ಸಭೆಯಲ್ಲಿ ಸುಪ್ರೀಂ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಒಂದೆಡೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಲು ಸಂವಿಧಾನಾತ್ಮಕವಾಗಿ ಸಾಧ್ಯವಿಲ್ಲ. ಮತ್ತೊಂದೆಡೆ ನ್ಯಾಯಾಲಯದ ಆದೇಶದ ಸಂಪೂರ್ಣ ಅನುಷ್ಠಾನ ನಿಜವಾಗಲೂ ಕಷ್ಟ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯ ವಿಚಾರಣೆ ಅಕ್ಟೋಬರ್ 18 ರಂದು ಬರುವ ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷ್ಠಿಯಿಂದ ಭಾರವಾದ ಹೃದಯದಿಂದ ನ್ಯಾಯಾಲಯದ ಆದೇಶದ ಪಾಲನೆ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಬೆಂಗಳೂರು-ಮಂಡ್ಯ-ಮೈಸೂರು ಹಾಗೂ ಈ ನಡುವೆ ಇರುವ ಹಳ್ಳಿಗಳಲ್ಲಿ ವಾಸಿಸುವ ಜನತೆಗೆ ಕುಡಿಯುವ ನೀರು ಕೊಡುತ್ತೇವೆ. ಅಲ್ಲದೆ, ನೀರಾವರಿ ಸಮನ್ವಯ ಸಮಿತಿಯಲ್ಲಿ ಈಗಾಗಲೇ ತೀರ್ಮಾನವಾಗಿರುವಂತೆ ಬೆಳೆಗಳಿಗೂ ನೀರು ಕೊಡಲು ಪ್ರಾಮಾಣಿಕ ಹಾಗೂ ಗಂಭೀರ ಪ್ರಯತ್ನ ಮಾಡುತ್ತೇವೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.