ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ 52 ದಿನಗಳಿಂದ ಜಾರಿಯಲ್ಲಿದ್ದ ಕರ್ಫ್ಯೂ ತೆರವುಗೊಳಿಸಲಾಗಿದೆ. ಆದರೆ ಪುಲ್ವಾಮ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರ ಬುರ್ಹಾನ್ ವನಿ ಹತ್ಯೆ (ಜು.8)ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಹಿಂಸಾಚಾರ, ಗಲಭೆ ಹಿನ್ನಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕಣಿವೆ ರಾಜ್ಯದಲ್ಲಿ ಹಲವೆಡೆ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದ ಪುಲ್ವಾಮಾ ಹೊರತುಪಡಿಸಿ ಹಲವೆಡೆ ಹೇರಲಾಗಿದ್ದ ಕರ್ಫೂ ವನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಹಿಂಸಾಚಾರ, ಪ್ರತಿಭಟನೆಗಳು ಮುಂದುವರೆದಿರುವುದರಿಂದ ಪುಲ್ವಾಮಾ ಹಾಗೂ ಇನ್ನು ಕೆಲ ಪ್ರದೇಶಗಳಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ನೆ ಮುಂದುವರೆಸಲಾಗಿದೆ. ಇಲ್ಲಿ 10 ಮಂದಿ ಒಟ್ಟಿಗೆ ಸೇರುವುದನ್ನು ನಿಷೇಧಿಸಲಾಗಿದೆ.
ಕರ್ಫ್ಯೂ ತೆರವುಗೊಮ್ಡ ಹಿನ್ನಲೆಯಲ್ಲಿ ಕಾಶ್ಮೀರದ ವಿವಿಧ ನಗರಗಳಲ್ಲಿ ಖಾಸಗಿ ಬಸ್, ಆಟೋ ರಿಕ್ಷಾ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಲವೆಡೆ ಕಲೆದ ಎರಡು ದಿನಗಳಿಂದ ಪರಿಸ್ಥಿತಿ ಶಾಂತವಾಗಿದ್ದು, ಸಹಜ ಸ್ಥಿತಿಯತ್ತ ಮರಳುತ್ತಿದೆ.
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಈ ವರೆಗೂ 70 ಮಂದಿ ಸಾವಿಗೀಡಾಗಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.