ನವದೆಹಲಿ : ಗೌರಿ-ಗಣೇಶ ಹಬ್ಬ ಆಚರಣೆಯು ಪರಿಸರ ಸ್ನೇಹಿಯಾಗಿರಲಿ. ರಾಸಾಯನಿಕ ಬಣ್ಣಗಳಿಂದ ಪರಿಸರ, ನೀರು ಮಲಿನವಾಗುತ್ತದೆ. ಆದುದರಿಂದ ಹೆಚ್ಚೆಚ್ಚು ಮಣ್ಣಿನ ಗಣೇಶ ಮತ್ತು ದುರ್ಗೆಯ ವಿಗ್ರಹಗಳನ್ನು ತಂದು ಪೂಜೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 23ನೇ ಸರಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗನೆಷ ಹಬ್ಬ, ಕಾಶ್ಮೀರ ವಿಚಾರ, ಕ್ರೀಡೆ, ಶಿಕ್ಷಣ, ಸ್ವಚ್ಛತೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡು ಗಣೇಶ ಚೌತಿ ಮತ್ತು ದುರ್ಗಾ ಪೂಜೆ ಆಚರಿಸಿ ಎಂದು ಸಲಹೆ ಮಾಡಿದರು. ಆಚರಣೆಯು ಪರಿಸರ ಸ್ನೇಹಿಯಾಗಿರಲಿ. ರಾಸಾಯನಿಕ ಬಣ್ಣಗಳಿಂದ ಪರಿಸರ, ನೀರು ಮಲಿನವಾಗುತ್ತದೆ. ಆದುದರಿಂದ ಹೆಚ್ಚೆಚ್ಚು ಮಣ್ಣಿನ ಗಣೇಶ ಮತ್ತು ದುರ್ಗೆಯ ವಿಗ್ರಹಗಳನ್ನು ತಂದು ಪೂಜೆ ಮಾಡಿ. ನಮ್ಮ ಪರಿಸರವನ್ನು ರಕ್ಷಿಸಿದರೆ ದೇವರನ್ನು ಪೂಜಿಸಿದಂತೆಯೇ ಎಂದರು.
ಕಾಶ್ಮೀರ ವಿಚಾರವಾಗಿ ಮಾತನಾಡಿದ ಪ್ರಧಾನಿ, ಕಾಶ್ಮೀರದಲ್ಲಿನ ಮುಗ್ಧ ಜನರನ್ನು, ಮಕ್ಕಳನ್ನು ಬಳಸಿಕೊಂಡು ಹಿಂಸಾಚಾರವೆಸಗಲು ಪ್ರಯತ್ನಿಸುತ್ತಿರುವ ಜನರು ಮುಂದೊಂದು ದಿನ ಅಲ್ಲಿನ ಯುವಕರಿಗೆ ಉತ್ತರ ಕೊಡಬೇಕಾಗುತ್ತದೆ. ಕಾಶ್ಮೀರದಲ್ಲಿ ನಾಗರಿಕರಾಗಿರಲಿ, ಯೋಧರಾಗಿರಲಿ ಇದುವರೆಗೆ ಮೃತಪಟ್ಟವರು ಯಾರೇ ಆಗಿರಲಿ, ಅವರ ಸಾವಿನಿಂದ ಆದ ನಷ್ಟ ಇಡೀ ದೇಶಕ್ಕಾದ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ಆಗಸ್ಟ್ 20ರಂದು ಅಲಹಾಬಾದಿನಲ್ಲಿ ಸ್ವಚ್ಛ ಗಂಗಾ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಗ್ರಾಮದ ಮುಖ್ಯಸ್ಥರು, ಜನರು ಬಹಿರ್ದೆಸೆ ಮಾಡಿದ್ದನ್ನು ಗಂಗಾ ನದಿಗೆ ಹೋಗುವುದನ್ನು ನಿಲ್ಲಿಸಿ ಶೌಚಾಲಯ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಗಂಗಾ ನದಿ ಸ್ವಚ್ಛತೆ ನಿಟ್ಟಿನಲ್ಲಿ ಗ್ರಾಮದ ಜನರು ತೆಗೆದುಕೊಂಡ ನಿರ್ಧಾರ ಪ್ರಶಂಸನೀಯ ಎಂದು ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಢಾಣಾಪುರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮ ಪೋಷಕರ ವಿರೋಧದ ನಡುವೆಯೂ ಉಪವಾಸ ಮಾಡಿ ಶೌಚಾಲಯ ನಿರ್ಮಿಸಿಕೊಂಡಿರುವುದು ಪ್ರಶಂಸನಿಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದ ಭಾರತೀಯ ಕ್ರೀಡಾ ಪಟುಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಕ್ರೀಡೆಯ ವಿಷಯದಲ್ಲಿ ಭಾರತ ಇನ್ನಷ್ಟು ಮುಂದೆ ಸಾಗಬೇಕಾಗಿದೆ. ಕ್ರೀಡೆಗೆ ಸ್ಫೂರ್ತಿ ಅಗತ್ಯವಾಗಿದ್ದು ಜನರು ಈ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ರಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪುತ್ರಿಯರು ಉತ್ತಮ ಸಾಧನೆ ಮಾಡಿದ್ದಾರೆ. ಪಿವಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರನ್ನು ಶ್ಲಾಘಿಸಿದ ಮೋದಿ, ಅನೇಕ ವಿಭಾಗಗಳಲ್ಲಿ ಭಾರತದ ಆಟಗಾರರು ಪದಕ ಗೆಲ್ಲದಿದ್ದರೂ ಉತ್ತಮ ಸಾಧನೆ ಮಾಡಿದ್ದಾರೆ. ಲಲಿತಾ ಬಾಬರ್, ಅಭಿನವ್ ಬಿಂದ್ರಾ, ವಿಕಾಸ್ ಕೃಷ್ಣನ್ ಯಾದವ್ ಅವರು ಕೂಡ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.
ಕ್ರೀಡೆಯಲ್ಲಿನ ಬೆಳವಣಿಗೆ ಬಗ್ಗೆ ಮೌಲ್ಯಮಾಪನ ಮಾಡಲು ಸಮಿತಿಯೊಂದನ್ನು ರಚಿಸಿದ್ದೇವೆ. ಇದು ಮುಂದಿನ ಒಲಿಂಪಿಕ್ಸ್ ಹಾಗೂ ಕ್ರೀಡಾಪಟುಗಳ ಬಗ್ಗೆ ಮಾರ್ಗದರ್ಶನ ಮಾಡಲಿದೆ ಎಂದು ಪ್ರಧಾನಿ ತಿಳಿಸಿದರು.