ಬೆಂಗಳೂರು : ಕರ್ನಾಟಕ ಗೃಹ ಮಂಡಳಿ ಮೂಲಕ ರಾಜ್ಯದಲ್ಲಿ ಒಟ್ಟು 12,000 ನಿವೇಶನಗಳನ್ನು ಹಂಚಿಕೆಗೆ ಸಿದ್ದಪಡಿಸಲಾಗಿದೆ ಹಾಗೂ 2,175 ಎಕರೆ ಭೂಮಿಯನ್ನು ತಮ್ಮ ಅಧಿಕಾರ ಅವಧಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ ತಿಳಿಸಿದ್ದಾರೆ.
ಕರ್ನಾಟಕ ಗೃಹ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ತಮ್ಮ ಅಧಿಕಾರ ಅವಧಿಯ ಕೊನೆಯ ದಿನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ನಗರ ಪ್ರದೇಶದಲ್ಲಿ 50 :50 ಅನುಪಾತ ಹಾಗೂ ತಾಲ್ಲೂಕು ಹೋಬಳಿ ಮಟ್ಟದಲ್ಲಿ 60:40 ಅನುಪಾತದಲ್ಲಿ ಒಪ್ಪಿಗೆಕೊಡಲು ಮುಖ್ಯಮಂತ್ರಿಗಳನ್ನು ವಿನಂತಿಸಿದ್ದೇವೆ. ಅವರ ತೀರ್ಮಾನಕ್ಕಾಗಿ ನಿರೀಕ್ಷಿಸುತ್ತಿದ್ದೇವೆ. ರಾಜ್ಯದಲ್ಲಿ ಗೃಹ ಮಂಡಳಿಯ ಬಡಾವಣೆಗಳಲ್ಲಿ ಒಟ್ಟು 1,761 ನಿವೇಶನಗಳು ಮತ್ತು ಮನೆಗಳು ವಿಲೇವಾರಿಯಾಗದೇ ಉಳಿದಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿದ್ದಲ್ಲಿ ಮಂಡಳಿಗೆ ಅಂದಾಜು 150 ಕೋಟಿ ರೂ. ಗಳ ಆದಾಯ ಬರುತ್ತದೆ ಎಂದರು.
ಗೃಹ ಮಂಡಳಿ ರೈತರಿಂದ ಭೂಮಿಯನ್ನು ಪಡೆಯುವ ಕಾರ್ಯದಲ್ಲಿ ಬಹಳ ವಿಳಂಬವಾಗುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಸರ್ಕಾರ ಕಾಲಮಿತಿಯೊಳಗೆ ಭೂಮಿ ನೀಡಿದ ರೈತರಿಗೆ ಹಣ ಸಂದಾಯಕ್ಕೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅವರು ಹೇಳಿದರು.