ಮೈಸೂರು : ನಾಡಹಬ್ಬ ಮೈಸೂರು ದಸರಾ ಉತ್ಸವದ ಗಜಪಯಣಕ್ಕೆ ಹುಣಸೂರು ತಾಲೂಕಿನ ನಾಗಾಪುರದಲ್ಲಿ ಸಂಭ್ರಮದ ಚಾಲನೆ ದೊರೆಯಿತು.
ನಾಗಪುರ ಗಿರಿಜನ ಶಾಲೆಯ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ದೀಪ ಬೆಳಗಿಸಿ ಅರ್ಜುನ ನೇತೃತ್ವದ 6 ಆನೆಗಳಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೊದಲ ತಂಡದ ಗಜ ಪಯಣಕ್ಕೆ ಚಾಲನೆ ನೀಡಿದರು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅರ್ಜುನ, ಬಲರಾಮ, ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ವಿಜಯ ಸಂಜೆ 4ರ ವೇಳೆಗೆ ಅಲೋಕ ಅರಮನೆಗೆ ಆಗಮಿಸಿ ವಾಸ್ತವ್ಯ ಹೂಡಿದವು. ಚಾಮರಾಜ ನಗರದ ಕೆ.ಗುಡಿ ಆನೆ ಶಿಬಿರದಿಂದ ಗಜೇಂದ್ರ ಆನೆ ಕೂಡ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಿ ಅರ್ಜುನನ ತಂಡ ಸೇರಿಕೊಂಡಿತು. 26ಕ್ಕೆ ಆನೆಗಳ ತಂಡ ಅರಮನೆ ಆವರಣ ಪ್ರವೇಶಿಸಲಿವೆ.
ಈ ಬಾರಿ ಸಾಕಾನೆಗಳನ್ನು ಸುಲಭವಾಗಿ ಗುರುತಿಸಲು ಹಾಗೂ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಯುಐಡಿ (ಯುನಿಕ್ ಐಡೆಂಟಿಫಿಕೇಶನ್ ನಂಬರ್)ನೀಡಲಾಗಿದೆ. ದಸರಾ ಆನೆ ಸೇರಿ ಜಿಲ್ಲೆಯ ಎಲ್ಲ ಸಾಕಾನೆಗಳ ದೇಹಕ್ಕೆ ಮೈಕ್ರೋ ಚಿಪ್ ಅಳವಡಿಸಿ ಈ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗಿದೆ. ಯೋಜನೆಯಡಿ ಆನೆಯ ಕಿವಿಗೆ ಮೈಕ್ರೋಚಿಪ್ ಅಳವಡಿಸಿ ವಿಶಿಷ್ಟ ಗುರುತಿನ ಸಂಖ್ಯೆ ಒದಗಿಸಲಾಗಿದೆ. ದಸರಾ ಆನೆಗಳಾದ ಅರ್ಜುನ, ಬಲರಾಮ, ಅಭಿಮನ್ಯು ಸೇರಿ ಎಲ್ಲ ಆನೆಗಳಿಗೂ ಮೈಕ್ರೋ ಚಿಪ್ ಅಳಡಿಸುವ ಕಾರ್ಯ ವರ್ಷದ ಹಿಂದೆಯೇ ಪೂರ್ಣಗೊಂಡಿದೆ ಎಂದು ಡಿಸಿಎಫ್ ಗಣೇಶ್ ಭಟ್ ತಿಳಿಸಿದ್ದಾರೆ.