ನವದೆಹಲಿ : ಪಾಕಿಸ್ತಾನದ ಜತೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಸುವುದು ಈಗ ಪಾಕಿಸ್ತಾನದ ನಿರ್ಧಾರವನ್ನು ಅವಲಂಬಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಪಾಕಿಸ್ತಾನಕ್ಕೆ ತಿಳಿಸಿದ್ದಾರೆ ಎಂದು ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರದ ಭಾಗಗಳ ಅಕ್ರಮ ಸ್ವಾಧೀನ ತೆರವು ಮತ್ತು ಭಯೋತ್ಪಾದನಾ ಶಿಬಿರಗಳನ್ನು ಮುಚ್ಚುವುದು ಸೇರಿದಂತೆ ಐದು ಅಂಶಗಳ ಅಜೆಂಡಾಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಭಾರತ ಸದಾ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
ಕಾಶ್ಮೀರದ ಬಗ್ಗೆ ಮಾತುಕತೆ ನಡೆಸಬೇಕು ಎಂದು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌಧರಿ ಅವರ ಆಹ್ವಾನಕ್ಕೆ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಲ್ಲಿಸುವುದು ಮತ್ತು ಕಾಶ್ಮೀರ ಹಿಂಸಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಕೊನೆಗೊಳಿಸುವುದೇ ಮಾತುಕತೆಯ ಮುಖ್ಯ ಅಂಶಗಳು ಎಂದು ಜೈಶಂಕರ್ ತಿಳಿಸಿದ್ದಾರೆ.
೧)ಗಡಿಯಾಚೆಗಿನ ಭಯೋತ್ಪಾದನೆ, ೨)ಪಾಕಿಸ್ತಾನ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿರುವ ಜಮ್ಮು ಕಾಶ್ಮೀರದ ಭಾಗಗಳ ತೆರವು, ೩) ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಶಿಬಿರಗಳನ್ನು ಮುಚ್ಚುವುದು, ೪) ಅಂತರರಾಷ್ಟ್ರೀಯ ಮಟ್ಟದಲ್ಲಿ ಉಗ್ರರು ಎಂದು ಗುರುತಿಸಲಾದವರ ಬಂಧನ ಮತ್ತು ವಿಚಾರಣೆ, ೫)ಮುಂಬೈ ಮತ್ತು ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ
ಪಾಕಿಸ್ತಾನ ಮಾತುಕತೆಗೆ ಆಹ್ವಾನ ನೀಡಿತ್ತು. ಆ ಆಹ್ವಾನಕ್ಕೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಈಗ ಪಾಕ್ ನಿರ್ಧರಿಸಬೇಕಿದೆ ಎಂದು ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.