ಬೆಂಗಳೂರು : ಗೋವು ಕೇಳಿದ್ದನ್ನೆಲ್ಲಾ ಕೊಡುತ್ತದೆ. ಪುರಾಣದಲ್ಲಿ ಹೇಳಲಾದ ಕಾಮಧೇನು ಹೇಗೆ ಬೇಡಿದ್ದನ್ನೆಲ್ಲಾ ನೀಡುತ್ತದೆಯೋ, ಹಾಗೆಯೇ ದೇಶೀಯ ಗೋವುಗಳು ಕೂಡ ಎಲ್ಲವನ್ನು ನೀಡುತ್ತದೆ. ಆರೋಗ್ಯಕ್ಕೆ, ಸಂಪತ್ತಿಗೆ, ಪುಣ್ಯ ಸಂಪಾಧನೆಗೆ ಗೋವು ಮೂಲವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಅಂದು ಸುರಭಿ ಧೇನುವು ತನ್ನ ಮಕ್ಕಳಿಗೆ ಹೆಚ್ಚಿನ ಶ್ರಮ ನೀಡಿದ್ದಕ್ಕಾಗಿಯೇ ರೋಧಿಸಿತಂತೆ, ಇಂದು ಗರ್ಭದಲ್ಲಿ ಇರುವಾಗಲೇ ಗೋವನ್ನು ಹತ್ಯೆಮಾಡಲಾಗುತ್ತಿದ್ದೆ, ಇಂತಹ ಹೀನ ಕೃತ್ಯದಿಂದ ಆ ಸುರಭಿ ಮಾತೆಗೆ ಅದೆಷ್ಟು ನೋವಾಗಿರಬಹುದು ಎಂದು ಖೇದ ವ್ಯಕ್ತಪಡಿಸಿದ ಶ್ರೀಗಳು, ಗೋವಿನ ಹೃದಯಾಕ್ರಂದನವನ್ನು ಅರ್ಥಮಾಡಿಕೊಳ್ಳದಿದ್ದರೆ ಸರ್ವನಾಶ ನಿಶ್ಚಿತ ಎಂದು ಹೇಳಿದರು.
ಸರ್ಪಭೂಷಣ ಮಠದ ಶ್ರೀ ಮ| ನಿ| ಪ್ರ| ಮಲ್ಲಿಕಾರ್ಜುನ ಮಹಾಸ್ವಾಮಿಗಳವರು ಸಂತಸಂದೇಶ ನೀಡಿ, ಗೋವಿನೊಂದಿಗಿನ ಒಡನಾಟದಿಂದ ಬುದ್ಧಿ ಚುರುಕಾಗುತ್ತದೆ, ದಾರಿದ್ರ್ಯ ನಿವಾರಣೆ ಆಗುತ್ತದೆ. ಗೋವಿನ ತ್ಯಾಜವೂ ಕೂಡ ಅಮೂಲ್ಯವಾಗಿದ್ದು, ಗೋಹತ್ಯೆ ಅನ್ನುವುದು ಪಾಪಗಳ ಆಗರವಾಗಿದೆ. ಗೋರಕ್ಷಣೆಯಿಂದ ಒಳಿತಾಗುತ್ತದೆ ಎನ್ನುವುದಕ್ಕೆ ರಾಘವೇಶ್ವರ ಶ್ರೀಗಳೇ ಪ್ರತ್ಯಕ್ಷ ಉದಾಹರಣೆ, ಅವರ ಮೇಲೆ ಎಷ್ಟೆಲ್ಲಾ ಆಕ್ರಮಣಗಳಾದರೂ ಗೋಸೇವೆಯ ಪುಣ್ಯದಿಂದಾಗಿ ಅವರಿಗೆ ಏನು ಆಗಲಿಲ್ಲ ಎಂದರು.
ಕೃಷಿತಜ್ಞ ರಮೇಶ್ರಾಜು ಮಂಡ್ಯ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾಪುರಸ್ಕಾರವನ್ನು ಸ್ವೀಕರಿಸಿ ಗೋ ಆಧಾರಿತ ಕೃಷಿಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪೀಣ್ಯ ಭಾಗದ ಹಲವು ಉದ್ಯಮಿಗಳು ಶ್ರೀಗಳಿಗೆ ಫಲ ಸಮರ್ಪಿಸಿ, ಆಶೀರ್ವಾದವನ್ನು ಪಡೆದರು. ಶ್ರೀಭಾರತೀಪ್ರಕಾಶನವು ಹೊರತಂದ ‘ವಿಚಾರ ವಿಹಾರ ಭಾಗ 2’ ಪುಸ್ತಕವನ್ನು ರಾಘವೇಶ್ವರಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಶ್ರೀಮಲ್ಲಿಕಾರ್ಜುನ ಸ್ವಾಮಿಗಳವರು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಕ್ಷಮಾ ಕಿರಣ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಪೋಳ್ಯಮಠ ರಾಮಚಂದ್ರ ಭಟ್ ಕುಟುಂಬದವರಿಂದ ಸರ್ವಸೇವೆ ನೆರವೆರಿತು. ಮಹಾವಿಷ್ಣು ಸಹಸ್ರನಾಮ ಭಜನಾ ಮಂಡಳಿ,ಯಲಹಂಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು, ಯಜುರುಪಾಕರ್ಮ ಕಾರ್ಯಕ್ರಮ, ಪುರುಷಸೂಕ್ಥ ಹವನ ಸಂಪನ್ನವಾಯಿತು. ಶ್ರೀಮಠದ ಪದಾಧಿಕಾರಿಗಳು, ಭಜನಾಮಂಡಳಿ ಸದಸ್ಯರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಸತ್ಯನಾರಾಯಣ ಭಟ್ ಹಾಗೂ ರಾಘವೇಂದ್ರ ಕಡ್ನಮನೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.