ನವದೆಹಲಿ : ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಛೇರಿಯ ನೂತನ ಕಟ್ಟಡ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ದೇಶ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರಿಗಾಗಿ ದುಡಿಯುವ ನಿಟ್ಟಿನಲ್ಲಿ ಬಿಜೆಪಿ ಅದ್ಯತೆ ನೀಡುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷ ವಾಖ್ಯಕ್ಕೆ ಬಿಜೆಪಿ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರ ದಿನಗಳಲ್ಲಿ ಬಿಜೆಪಿ ಹಲವಾರು ಸವಾಲುಗಳನ್ನು ಎದುರಿಸಿದೆ. ಈ ನೂತನ ಕಛೇರಿಯ ಕಟ್ಟಡ ಕೂಡ ಪಕ್ಷದ ಕಾರ್ಯಕರ್ತರ ನಿರಂತರ ದುಡಿಮೆಯ ಶ್ರಮದ ಫಲವಾಗಿದೆ ಎಂದು ಹೇಳಿದರು.
ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿಯ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಕಟ್ಟಡ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದು, 70 ಕೊಠಡಿಗಳನ್ನು ಹೊಂದಿದೆ. ವೈಫೈ ಸೌಲಭ್ಯ, ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ, ಸಮ್ಮೇಳನ ಸಭಾಂಗಣ, ಸ್ಟುಡಿಯೋ, ಗ್ರಂಥಾಲಯ ಸೇರಿದಂತೆ ಹಲವು ವಿಶಿಷ್ಟತೆಯನ್ನು ಹೊಂದಿದೆ.
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಶಾಲಾ ಮಕ್ಕಳ ಜೊತೆಗೆ ರಕ್ಷಾಬಂಧನವನ್ನೂ ಆಚರಿಸಿದರು. ಶಾಲಾ ಮಕ್ಕಳಿಂದ ತಮ್ಮ ಕೈಗೆ ರಾಕಿ ಕಟ್ಟಿಸಿಕೊಂಡು ಮಕ್ಕಳನ್ನು ಹರಸಿದರು.
ಒಲಿಂಪಿಕ್ಸ್ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದು ಕೊಟ್ಟ ಸಾಕ್ಷಿ ಮಲಿಕ್ ರನ್ನು ಪ್ರಧಾನಿ ಇದೇ ವೇಳೆ ಅಭಿನಂದಿಸಿದರು.