ಬೆಂಗಳೂರು : ಸರ್ವ ಕಾಲ, ಸರ್ವ ದೇಶ, ಸರ್ವ ಸಮಯ, ಸರ್ವ ಜನಾಂಗಗಳಲ್ಲಿಯೂ ಸಲ್ಲುವಂತಹ ನಿಯಮಗಳು ಇರುತ್ತವೆ, ಅವುಗಳಲ್ಲಿ ಒಂದು 'ಯಾವುದು ನಿನಗೆ ಹಿಂಸೆಯೋ ಅದನ್ನು ಬೇರೆಯವರಿಗೆ ಮಾಡಬೇಡ'. ಈ ನಿಯಮವನ್ನು ಎಲ್ಲರೂ ಪಾಲಿಸಲಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಬೆಂಗಳೂರಿನ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಮಾತನಾಡಿ, 'ಭಾರತದ ದೇಸಿ ಗೋತಳಿಗಳು ಉಚ್ಛ ಗುಣಮಟ್ಟದ್ದಲ್ಲ ಅಂತ ಹೇಳಿ ವಿದೇಶೀ ತಳಿಗಳನ್ನು ತಂದು ಸಂಕರ ಮಾಡಲು ಸರಕಾರ ಹಾಗೂ ವಿಜ್ಞಾನಿಗಳು ಅವಕಾಶ, ಪ್ರೋತ್ಸಾಹ ನೀಡಿದರು. ಹಾಗೆಂದು ಭಾರತದ ಮನುಷ್ಯರ ಗುಣಮಟ್ಟ ಸರಿ ಇಲ್ಲವೆಂದು, ಮದುವೆ ಮಾಡಿಸದೆ ವಿದೇಶೀ ಸಂತತಿಯನ್ನು ಪ್ರನಾಳಿಸುವ ಮೂಲಕ ಸಂತತಿ ಬೆಳೆಸಲು ಸಾಧ್ಯವೇ? ಗೋವಿಗೆ ನಾವು ಏನು ಮಾಡುತ್ತಿದ್ದೇವೆಯೋ, ಅದನ್ನು ನಮಗೆ ಮಾಡಿದ್ರೆ ಒಪ್ಪಿಗೆಯೇ?' ಎಂದು ಪ್ರಶ್ನಿಸಿದರು.
'ಒಮ್ಮೆ ಗೋವಿನ ಸ್ಥಾನದಲ್ಲಿ ನಿಂತು ಯೋಚಿಸಿ; ಅದನ್ನು ಬಡಿದು ಕಸಾಯಿಖಾನೆಗೆ ತುಂಬಿಕೊಂಡು ಹೋಗುವ ಸ್ಥಿತಿ, ಜೀವಂತ ಕರುವಿನ ಚರ್ಮವನ್ನು ಸುಲಿಯುವುದನ್ನು ಗಮನಿಸಿ; ಅಂತಹ ಹಿಂಸೆಯನ್ನು ನಾವು ಒಪ್ಪಲಾಗದು. ಹಾಗಾಗಿ ನಾವು ಗೋವಿಗೆ ಹಿಂಸೆಯನ್ನು ನೀಡದೆ ಸಂರಕ್ಷಿಸೋಣ. ಗೋವಿನ ಮೂಲಕ ಒಟ್ಟಿಗೆ ಸಮಾಜವನ್ನು ಕಟ್ಟೋಣ' ಎಂದು ಕರೆ ನೀಡಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ, ಉಪಾಸನಾ ಧ್ಯಾನಮಂದಿರದ ಸದ್ಗುರು ಚಂದನ್ ರಾಮ್ಜಿ ತಮ್ಮ ಸಂತ ಸಂದೇಶದಲ್ಲಿ, ಗೋವಿನ ಮಹತ್ವ ಆತ್ಮಕ್ಕಿಂತ ಮೀರಿದ್ದು, ರಮಣ ಮಹರ್ಷಿಗಳು ಜೀವನದಲ್ಲಿ ಕಣ್ಣೀರು ಹಾಕಿದ್ದು ಕೇವಲ ಒಮ್ಮೆ, ಅದು ಅವರ ಗೋಶಾಲೆಯ ಲಕ್ಷ್ಮಿ ಎಂಬ ಗೋವು ದೇಹಾಂತ್ಯವಾದಾಗ ಮಾತ್ರ. ಭಾರತದ ಸಂಸ್ಕೃತಿಯ ಹಾಗೂ ಆಧ್ಯಾತ್ಮಿಕ ರಾಯಭಾರಿ ಯಾವುದಾದರೂ ಆಗಬಹುದು ಅಂದರೆ ಅದು ಗೋವು. ರೈತ ಬೇರೆ ಅಲ್ಲ ಗೋವು ಬೇರೆ ಅಲ್ಲ, ಭಾರತ ಜಗದ್ಗುರುವಾಗಬೇಕಾದರೆ ಅದು ಗೋವು ಮತ್ತು ರೈತರಿಂದ ಮಾತ್ರ ಎಂದರು.
ಹತ್ತು ಸಾವಿರ ಗೋಬರ್ ಗ್ಯಾಸ್ ಘಟಕಗಳನ್ನು ಸ್ಥಾಪಿಸಿ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ವಿ.ಕುಮಾರ್ ಗೌಡ ಹಾಗೂ ಹಳ್ಳಿಯಲ್ಲಿ ಪಾರಂಪರಿಕವಾಗಿ ಗೋಸೇವೆ ಮಾಡುತ್ತಿರುವ ಮಂಜುನಾಥ ಆರ್.ಭಟ್ಟ, ಹೆಬ್ಳೇಕೇರಿ ಇವರುಗಳಿಗೆ ಗೋಸೇವಾ ಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀ ಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ "ಗೋ-ಸಂಪ್ರದಾಯಗೀತೆ" ಧ್ವನಿಮುದ್ರಿಕೆಯನ್ನು ಸದ್ಗುರು ಚಂದನ್ ರಾಮ್ಜಿ ಲೋಕಾರ್ಪಣೆ ಮಾಡಿದರು.
ಕಾರವಾರ, ಅಂಕೋಲಾ, ಕುಮಟಾ ಹಾಗೂ ಕೆಕ್ಕಾರು ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರವೀಂದ್ರ ಭಟ್ ಸೂರಿ ಹಾಗೂ ರಮ್ಯಾ ಸುರೇಶ್ ಮಾಬ್ಲಡ್ಕ ನಿರೂಪಿಸಿದರು. ಅನಂತರ ಕೋರಿಕ್ಕಾರ್ ಸಹೋದರಿಯರಾದ ಪೂಜಾ ಮತ್ತು ಪ್ರಿಯಾಂಕ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಗುರುಚರಿತ್ರೆ ಪಾರಾಯಣ, ಮಹಾಮೃತ್ಯುಂಜಯ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.