ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಮ್ಮ ಸೇವಾವಧಿಯ ಕೊನೆಯ ವಿತ್ತನೀತಿಯನ್ನು ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕಳೆದ ಐದು ವರ್ಷಗಳಲ್ಲಿನ ಅತಿ ಕಡಿಮೆ ರೆಪೊ ದರ 6.5% ರಷ್ಟಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಬ್ಯಾಂಕ್ ಗಳಿಗೆ ಪಾವತಿಸುವ ಹಣ ರಿವರ್ಸ್ ರೆಪೊ ದರವನ್ನು ಶೇಕಡಾ 6ರಷ್ಟು ಮತ್ತು ಕ್ಯಾಶ್ ರಿಸರ್ವ್ ದರವನ್ನು ಶೇಕಡಾ 4ರಷ್ಟು ಕಾಯ್ದುಕೊಳ್ಳಲಾಗಿದೆ.
ರಘುರಾಂ ರಾಜನ್ ರ ಮೂರು ವರ್ಷಗಳ ಸೇವಾವಧಿ ಸೆ.4ಕ್ಕೆ ಕೊನೆಗೊಳ್ಳಲಿದೆ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ವಿಶೇಷ ಒತ್ತು ನೀಡಿದ್ದ ರಾಜನ್ ತಮ್ಮ ಕಡೆಯ ವಿತ್ತನೀತಿ ಪ್ರಕಟಿಸಿ, ಪ್ರತಿಕ್ರಿಯಿಸಿ, ಬಡ್ಡಿದರಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ. ಈಗಿನ ದರವನ್ನೇ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಹೊಸ ಆರ್ಥಿಕ ನೀತಿ ಜಾರಿಗೆ ಎದುರು ನೋಡಲಾಗುತ್ತಿದೆ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆ ಅಂಗೀಕಾರವಾಗಿದ್ದು, ಇದರಿಂದ ಆರ್ಥಿಕ ಸುಧಾರಣೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದಿದ್ದಾರೆ.
ಬೆಲೆ ಏರಿಕೆ ಮತ್ತು 7ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದಿಂದಾಗಿ ಮುಂದಿನ ವರ್ಷ ಮಾರ್ಚ್ 2017ರಲ್ಲಿ ಹಣದುಬ್ಬರ ಶೇಕಡಾ 5ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಚಿಲ್ಲರೆ ಹಣ್ಣದುಬ್ಬರ ಮತ್ತು ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಚಿಲ್ಲರೆ ಹಣದುಬ್ಬರ ಗಮನದಲ್ಲಿರಿಸಿಕೊಂಡು ಬಡ್ದಿ ದರದಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯನ್ನು ಈ ಮೊದಲೇ ಮಾಡಲಾಗಿತ್ತು. ಬದಲಾಗಿರುವ ವ್ಯವಸ್ಥೆಯಂತೆ ಇನ್ನು ಮುಂದೆ ರೆಪೋ ದರವನ್ನು ನಾಲ್ವರು ಸದಸ್ಯರ ವಿತ್ತ ಸಮಿತಿ ನಿರ್ಧರಿಸಲಿದ್ದು, ಅಕ್ಟೋಬರ್ 4ರಂದು ಹೊಸ ನೀತಿ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.