ಇಸ್ಲಾಮಾಬಾದ್ : ಉಗ್ರರನ್ನು ಹುತಾತ್ಮರಂತೆ ವೈಭವೀಕರಿಸಬೇಡಿ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಉಗ್ರವಾದಕ್ಕೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇಸ್ಲಾಮಾಬಾದಿನಲ್ಲಿ ನಡೆಯುತ್ತಿರುವ ಸಾರ್ಕ್ ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಬಳಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಉಗ್ರರು ಎಲ್ಲೆಡೆ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭಯೋತ್ಪಾದನೆಯನ್ನು ಉತ್ತಮ ಮತ್ತು ಕೆಟ್ಟ ಎಂದು ವರ್ಗೀಕರಿಸಬೇಡಿ. ಉಗ್ರರಲ್ಲಿ ಒಳ್ಳೆಯ ಭಯೋತ್ಪಾದಕರು ಮತ್ತು ಕೆಟ್ಟ ಭಯೋತ್ಪಾದಕರು ಎಂಬ ವ್ಯತ್ಯಾಸವಿಲ್ಲ. ಉಗ್ರರೆಲ್ಲ ಜಗತ್ತಿನ ನಾಶಕ್ಕೆ ಮುಂದಾಗುವವರು ಎಂದು ರಾಜನಾಥ್ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯನ್ನು ಪಾಕಿಸ್ತಾನದಲ್ಲಿ ಹುತಾತ್ಮನೆಂದು ಬಿಂಬಿಸಿ ಕರಾಳ ದಿನಾಚರಣೆ ಮಾಡಿರುವುದರಿಂದ ಉಗ್ರರಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗುವುದು ಎಂದರು.
ಯಾರು ಭಯೋತ್ಪಾದಕರಿಗೆ ಬೆಂಬಲ, ಪ್ರೋತ್ಸಾಹ, ರಕ್ಷಣೆ, ಸಹಾಯ ನೀಡುತ್ತಾರೆಯೋ ಅವರನ್ನು ಪ್ರತ್ಯೇಕಿಸಿ ಒಬ್ಬಂಟಿಗಳನ್ನಾಗಿ ಮಾಡಬೇಕು. ಉಗ್ರರ ವಿರುದ್ಧ ಮಾತ್ರವೇ ಕಠಿಣ ಕ್ರಮ ತೆಗೆದುಕೊಂಡರೆ ಸಾಲದು, ಉಗ್ರ ಸಂಘಟನೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ರಾಜನಾಥ್ ತಿಳಿಸಿದ್ದಾರೆ.
ಈ ನಡುವೆ ಸಾರ್ಕ್ ಶೃಂಗ ಸಭೆಯಲ್ಲಿ ರಾಜನಾಥ್ ಸಿಂಗ್ ಭಾಷಣದ ಚಿತ್ರೀಕರಣ ಹಾಗೂ ವರದಿ ಮಾಡಲು ತೆರಳಿದ್ದ ಮಾಧ್ಯಮಗಳಿಗೆ ಪಾಕ್ ನಿರ್ಬಂಧ ವಿಧಿಸಿತ್ತು ಎಂದು ತಿಳಿದುಬಂದಿದೆ.