ನವದೆಹಲಿ : ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳಲ್ಲಿನ ತಮ್ಮ ವಾಸ್ತವ್ಯವನ್ನು ಜೀವನ ಪರ್ಯಂತ ಮುಂದುವರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಸರ್ಕಾರೇತರ (ಎನ್ಜಿಒ) ಸಂಘಟನೆ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿ ಅನಿಲ್.ಆರ್.ದವೆ, ಯು.ಯು. ಲಲಿತ್ ಮತ್ತು ಎಲ್.ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿಗಳು ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತಿಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿಸಿದೆ.
ಒಂದುವೇಳೆ ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳಲ್ಲಿ ಇನ್ನೂ ವಾಸವಾಗಿದ್ದರೆ ಇಂತಹ ಸರ್ಕಾರಿ ವಸತಿಯನ್ನು ಇನ್ನು ಎರಡು ಅಥವಾ ಮೂರು ತಿಂಗಳಲ್ಲಿ ಖಾಲಿ ಮಾಡಬೇಕು. ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತು ಹೊಂದುವ ಹಕ್ಕು ಅವರಿಗೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಲಹಾಬಾದ್ ಹೈಕೋರ್ಟಿನ ನಿರ್ದೇಶನದ ಹೊರತಾಗಿಯೂ ಉತ್ತರ ಪ್ರದೇಶ ಸರ್ಕಾರವು ಮಾಜಿ ಮುಖ್ಯಮಂತ್ರಿಗಳ ವಸತಿ ಮಂಜೂರಾತಿ ನಿಯಮಗಳು, 1997 ಎಂಬ ಕಾನೂನನ್ನು ರಚಿಸಿ ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ಲೋಕ ಪ್ರಹರಿ ಆರೋಪಿಸಿತ್ತು. ಈ ಕಾನೂನು ಸಂವಿಧಾನ ಬಾಹಿರ ಮತ್ತು ಅಕ್ರಮ ಎಂಬುದಾಗಿ ಎನ್ಜಿಒ ಅರ್ಜಿಯಲ್ಲಿ ಪ್ರತಿಪಾದಿಸಿತ್ತು. ಈ ಬಗ್ಗೆ ಸಮರ್ಪಕ ನಿರ್ದೇಶನ ನೀಡುವಂತೆ ಲೋಕ ಪ್ರಹರಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು.