ಚೆನ್ನೈ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಜತೆಗಿನ ಸಂಧಾನ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಜುಲೈ 29ರಂದು ಮುಷ್ಕರ ನಡೆಸಲು ನಿರ್ಧರಿಸಿದೆ.
ಭಾರತೀಯ ಬ್ಯಾಂಕ್ಗಳ ಸಂಘ (ಐಬಿಎ) ಮತ್ತು ಕೇಂದ್ರ ಸರ್ಕಾರದ ಜತೆ ನಡೆದ ಮಾತುಕತೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಯುಎಫ್ಬಿಯು ಪ್ರತಿಭಟನೆಗೆ ಕರೆ ನೀಡಿದೆ. ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವುದನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಮಂಡಳಿ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಖಚಿತ ಪಡಿಸಿದ್ದಾರೆ.
ಮುಖ್ಯ ಕಾರ್ವಿುಕ ಆಯುಕ್ತರ ಸಮ್ಮುಖದಲ್ಲಿ ದೆಹಲಿಯ ಕಾರ್ವಿುಕ ಸಚಿವಾಲಯದಲ್ಲಿ ಸಂಧಾನ ಮಾತುಕತೆ ಏರ್ಪಟ್ಟಿತ್ತು. ಈ ಸಭೆಯಲ್ಲಿಯೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಇದ್ದ ಹಿನ್ನೆಲೆಯಲ್ಲಿ ಇದೀಗ ಮುಷ್ಕರಕ್ಕೆ ಮುಂದಾಗಿದೆ. ಸಭೆಯಲ್ಲಿ ಎಐಬಿಇಎ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಐ, ಐಎನ್ವಿಇಎಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯು, ಎನ್ಒಬಿಒ ಸಂಸ್ಥೆಗಳು ಪಾಲ್ಗೊಂಡಿದ್ದವು ಎಂದು ವೆಂಕಟಾಚಲಂ ತಿಳಿಸಿದ್ದಾರೆ.
ಮುಷ್ಕರದ ಹಿನ್ನಲೆಯಲ್ಲಿ ಜುಲೈ 29ರಂದು ಬ್ಯಾಂಕ್ ಗಳು ಬಂದ್ ಇರಲಿದೆ. ಸಾರ್ವಜನಿಕ ವಲಯ ಬ್ಯಾಂಕ್ಗಳ 10ಲಕ್ಷದಷ್ಟು ನೌಕರರು, ಹಳೆ ತಲೆಮಾರಿನ ಖಾಸಗಿ ಬ್ಯಾಂಕ್ಗಳು ಮತ್ತು ವಿದೇಶಿ ಬ್ಯಾಂಕ್ಗಳ ಒಟ್ಟು 80,000 ಶಾಖೆಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.