ಬೆಂಗಳೂರು : ಗೋವು ಚಿನ್ನ, ಗೋವಿನೊಂದಿಗಿನ ಬದುಕು ಚೆನ್ನ, ಗೋರಕ್ಷಣೆಯಾದರೆ ರಾಷ್ಟ್ರದಲ್ಲಿ ಚಿನ್ನದ ಯುಗ ಆರಂಭವಾಗುತ್ತದೆ. ಗೋವಿಗೆ ಸ್ವಾತಂತ್ರ ಸಿಗುವವರೆಗೂ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಮಹತ್ತರವಾದ ಅರ್ಥವಿಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.
ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು, ಜನನದಿಂದ ಮರಣದವರೆಗೆ ಗೋವಿನ ಜೀವನ ಕಷ್ಟಗಳ ಚಕ್ರದಿಂದ ಕೂಡಿದೆ, ಗೋವಿನ ಹಿತಕ್ಕಾಗಿ ಅಲ್ಪಪ್ರಮಾಣದಲ್ಲಾದರೂ ಕಷ್ಟಗಳನ್ನು ನಾವು ತೆಗೆದುಕೊಳ್ಳೋಣ. ನನ್ನ ಮನೆ, ನನ್ನ ಕಾರು ಇದ್ದಂತೆ ನನ್ನ ಗೋವು ಎಂದು ಅಭಿಮಾನದಿಂದ ಹೇಳುವಂತಾಗಬೇಕು ಎಂದು ಆಶಿಸಿದರು.
ಬೆಳ್ಳಾವಿ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಸಂತಸಂದೇಶ ನೀಡಿ, ಸುಂದರ ಬದುಕಿಗೆ ಗೋವು ಅವಶ್ಯ. ಗೋವಿನ ಸಂತತಿ ನಾಶವಾಗುತ್ತಿರುವ ಕಾಲದಲ್ಲಿ ಗೋವಿನ ಕುರಿತು ಕ್ರಾಂತಿ ಮಾಡುತ್ತಿರುವ ರಾಘವೇಶ್ವರ ಶ್ರೀಗಳ ಕಾರ್ಯ ಅಭಿನಂದನೀಯ. ಮನೆ ಮನೆಗಳಲ್ಲಿ ಗೋವನ್ನು ಸಾಕಾಣೆಮಾಡುವುದರ ಮೂಲಕ ಶ್ರೀಗಳ ಕಾರ್ಯಕ್ಕೆ ಬೆಂಬಲ ನೀಡೋಣ, ರಾಘವೇಶ್ವರ ಶ್ರೀಗಳಿಗೆ ಬೆಳ್ಳಾವಿ ಮಠದ ಬೆಂಬಲ ಎಂದೂ ಇದೆ ಎಂದು ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.
ಅಕ್ರಮವಾಗಿ ಸಾಗಾಣೆಯಾಗುತ್ತಿದ್ದ1080 ಗೋವುಗಳನ್ನುಸಂರಕ್ಷಿಸಿ, 11 ವರ್ಷಗಳಿಂದ ಸ್ವಾವಲಂಬಿ ಗೋಶಾಲೆ ನಡೆಸುತ್ತಿರುವ ಮಧುಗಿರಿಯ ಮಧುಸೂಧನ ರಾವ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಕ ಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಕ ಪುರಸ್ಕಾರವನ್ನು ಸ್ವೀಕರಿಸಿದ ಮಧುಸೂಧನ ರಾವ್ ಅವರು, ಸ್ವಾವಲಂಬಿ ಗೋಶಾಲೆಯ ಕುರಿತು ಮಾತನಾಡಿದರು.
ಶ್ರೀಭಾರತೀಪ್ರಕಾಶನವು ಹೊರತಂದ ನಾಟ್ಯಾಮೃತವರ್ಷ ಎಂಬ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ಬೆಳ್ಳಾವಿ ಮಠದ ಶ್ರೀಗಳು ಲೋಕಾರ್ಪಣೆ ಮಾಡಿದರು. ನಾಟ್ಯಾಮೃತವರ್ಷ ಪುಸ್ತಕದ ಕರ್ತೃಗಳಾದ ಕೊರ್ಗಿ ಶಂಕರನಾರಾಯಣ ಉಪಾಧ್ಯ ಹಾಗೂ ಶೋಭಾ ಶಶಿಕುಮಾರ ಅವರನ್ನು ಶ್ರೀಗಳು ಆಶೀರ್ವದಿಸಿದರು. ಶ್ರೀಮಠದ ಗೋಪತ್ರಿಕೆ ‘ಕಾಮದುಘಾ’ದ ನಾಲ್ಕನೇ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಭಾಕಾರ್ಯಕ್ರಮದ ನಂತರ ಕಲಾರಾಮದಲ್ಲಿ ಕುಮಾರಿ ಕು. ವೈಷ್ಣವೀ, ಪೂರ್ಣಿಮಾ ಶಮಂತ್ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ರಾಮಚಂದ್ರಾಪುರ ಮಂಡಲಾಂತರ್ಗತ ಸಂಪೇಕಟ್ಟೆ, ನಿಟ್ಟೂರು ಹಾಗೂ ತುಮರಿ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.