ಬೆಂಗಳೂರು : ಸಂತರು ಪೂಜ್ಯರು, ಗೋಮಾತೆ ಪೂಜ್ಯರಿಗೂ ಪೂಜ್ಯಳು. ಗೋವಿನ ತ್ಯಾಜ್ಯವೂ ಸರ್ವಮಾನ್ಯವಾದುದು. ಆದರೆ ಇಂದು ಗೋಹತ್ಯೆ ಮಾತ್ರವಲ್ಲ, ಗೋಕ್ಷೀರದ ಹತ್ಯೆಯೂ ನಡೆಯುತ್ತಿದೆ, ರಾಸಾಯನಿಕ ಬಳಸಿ ಹಾಲಿನಲ್ಲಿರುವ ಗುಣಗಳನ್ನು ಕೊಲ್ಲಲಾಗುತ್ತಿದ್ದು, ಹಾಲು ಎಂಬ ಹೆಸರಿನಲ್ಲಿ ಬಿಳಿದ್ರವವನ್ನು ಮಾರಲಾಗುತ್ತಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.
ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು, ಗೋವನ್ನು ಜೀವನದೊಂದಿಗೆ ಜೋಡಿಸಿಕೊಳ್ಳಬೇಕು, ಹೊರತು ಮರಣದೊಂದಿಗಲ್ಲ. ನಿತ್ಯೋಪಯೋಗಿಯಾದ ಗವ್ಯೋತ್ಪನ್ನಗಳನ್ನು ಬಳಸುವ ಮೂಲಕ ಪರೋಕ್ಷವಾಗಿ ಗೋಸೇವೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ರಾಸಾಯನಿಕಯುಕ್ತವಾದ ವಸ್ತುಗಳನ್ನು ಬಳಸುವ ಬದಲು, ಗವ್ಯಾಧಾರಿತವಾದ ವಸ್ತುಗಳನ್ನು ಬಳಸಿದರೆ ಗೋವಿಗೂ ಕ್ಷೇಮ, ನಮಗೂ ಕ್ಷೇಮ ಎಂದು ಆಶಿಸಿದರು.
ಸಿದ್ಧಾರೂಢ ಮಿಷನ್ನಿನ ಶ್ರೀ ಆರೂಢಭಾರತೀ ಸ್ವಾಮಿಗಳು ಸಂತಸಂದೇಶ ನೀಡಿ, ಗೋವಿನ ಕುರಿತು ಕ್ಷುಲ್ಲಕತೆ ಸಲ್ಲ, ಚಿನ್ನ ಸುಟ್ಟಂತೆ ಸುಟ್ಟಂತೆ ಹೊಳೆಯುತ್ತದೆ, ಹಾಗೆಯೇ ಇಲ್ಲಿ ಪ್ರತಿದಿನ ಗೋವಿನ ಕುರಿತಾದ ವಿಚಾರಧಾರೆಗಳಿಂದ ಗೋವಿನ ಮಹತಿ ಎಲ್ಲೆಡೆ ಹರಡಲಿ. ವಿಶ್ವಮಟ್ಟದಲ್ಲಿ ಗೋವಿನ ಕುರಿತಾಗಿ ಮಹತ್ತರವಾದ ಕ್ರಾಂತಿಯನ್ನು ಮಾಡುತ್ತಿರುವ ರಾಘವೇಶ್ವರ ಶ್ರೀಗಳ ಕಾರ್ಯ ಅಭಿನಂದನೀಯ ಎಂದರು.
ಗೋಸೇವಕ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಜಿ ಟಿ ದಿವಾಕರ್ ಅವರು, ಹಸುಗಳೊಂದಿಗೆ ತಮ್ಮ ಒಡನಾಟವನ್ನು ಬಿಚ್ಚಿಟ್ಟರು. ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ದೇಶೀಯ ತಳಿಯ ಸಾಕಾಣೆ ಮಾಡುತ್ತಿರುವುದರಿಂದ ತಮಗೆ ದೊರೆತ ನೆಮ್ಮದಿಯನ್ನು ವಿವರಿಸಿದರು.
ಶ್ರೀಭಾರತೀಪ್ರಕಾಶನವು ಹೊರತಂದ ಜಿಜ್ಞಾಸೆ ಎಂಬ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ಆರೂಢಭಾರತಿ ಸ್ವಾಮಿಗಳು ಲೋಕಾರ್ಪಣೆ ಮಾಡಿದರು. ಗಮಕಿಗಳಾದ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ದಂಪತಿ ಸಭಾಪೂಜೆ ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಕಲಾರಾಮದಲ್ಲಿ ಕುಮಾರಿ ಮಯೂರಿ ಭಟ್ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ರಾಮಚಂದ್ರಾಪುರ ಮಂಡಲಾಂತರ್ಗತ ಕಾನುಗೋಡು, ಪುರಪ್ಪೆಮನೆ ಹಾಗೂ ಭೀಮನಕೋಣೆ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ನಾಡಿನ ವಿವಿಧ ಭಾಗಗಳ ಭಕ್ತರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.