ನವದೆಹಲಿ : ನಾಪತ್ತೆಯಾದ ಭಾರತೀಯ ವಾಯುಪಡೆ ಎಎನ್-32 ವಿಮಾನ 48 ಗಂಟೆಗಳಾದರೂ ಇನ್ನೂ ಪತ್ತೆಯಾಗಿಲ್ಲ. ವಾಯುಪಡೆ, ನೇವಿ, ಕೋಸ್ಟ್ಗಾರ್ಡ್ಗಳಿಂದ ಬಂಗಾಳ ಕೊಲ್ಲಿಯಲ್ಲಿ ನಿರಂತರ ಹುಡುಕಾಟ ನಡೆಯುತ್ತಿದೆ.
ಕಳೆದ 2 ದಿನಗಳಿಂದ ಜಲಾಂತರ್ಗಾಮಿ ನೌಕೆಯೂ ಹುಡುಕಾಟ ನಡೆಸುತ್ತಿದೆ. ಈ ನಡುವೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಘಟನೆಗೆ ಸಂಬಂಧಿಸಿದಂತೆ ವೈಮಾನಿಕ ಸಮೀಕ್ಷೆ ನಡೆಸಿದ್ದು, ಐಎಎಫ್ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ವಾಯುಪಡೆ, ನೌಕಾದಳ, ವಿಪತ್ತು ನಿರ್ವಹಣಾ ಪಡೆಯ ನೂರಾರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಇಸ್ರೋ ಉಪಗ್ರಹ ಸೇವೆಯನ್ನೂ ಪಡೆದುಕೊಳ್ಳಲಾಗುತ್ತಿದೆ. ನೌಕಾದಳದ 18 ಸಿಬ್ಬಂದಿಗಳು ಹಾಗೂ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಗಳು ಬಂಗಾಳಕೊಲ್ಲಿಯಲ್ಲಿ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ಶೋಧ ಕಾರ್ಯದಲ್ಲಿ ಒಂದು ಜಲಾಂತರ್ಗಾಮಿ ನೌಕೆ ಕೂಡ ಕಾರ್ಯ ನಡೆಸುತ್ತಿದ್ದು, 8 ಪಿ81 ವಿಮಾನಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಇದಲ್ಲದೆ ಸಿ130 ವಿಮಾನಗಳು, ಡೋರ್ನಿಯರ್ಸ್ಸ್ ಗಳು ಶೋಧ ಕಾರ್ಯಾಚರಣೆ ತೊಡಗಿಕೊಂಡಿವೆ.
ವಿಮಾನ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹಲವು ಕುತೂಹಕಾರಿ ಅಂಶಗಳ ತಿಳಿದುಬಂದಿದ್ದು, ವಿಮಾನ ಹಠಾತ್ ದುರಂತಕ್ಕೀಡಾಗಿರಬಹುದು ಎಂದು ಶಂಕಿಸಿದ್ದಾರೆ.
ಜುಲೈ22ರಂದು ಬೆಳಗ್ಗೆ ಚೆನ್ನೈನಿಂದ ಟೇಕ್ಆಫ್ ಆದ ವಿಮಾನ ಅಂಡಮಾನ್ ನಿಕೋಬಾರ್ನ ಪೋರ್ಟ್ ಬ್ಲೇರ್ಗೆ 11.30ರ ವೇಳೆಗೆ ತಲುಪಬೇಕಿತ್ತು. ಆದರೆ ನಾಪತ್ತೆಯಾದ ವಿಮಾನದ ಬಗ್ಗೆ ಈ ವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಹೆಚ್ಚೂಕಡಿಮೆ 23,000 ಎತ್ತರಕ್ಕೆ ತಲುಪಿದ ಬಳಿಕ ವಿಮಾನ ಮತ್ತೆ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದೆ.