ನವದೆಹಲಿ : ಹಿಜ್ಬುಲ್ ಮುಜಾಹಿ ದೀನ್ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಪಾಕಿಸ್ತಾನ ನಡೆಸಿದ್ದ ’ಕರಾಳ ದಿನಾಚರಣೆ’ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಣಿವೆ ರಾಜ್ಯದಲ್ಲಿ ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಿ ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬುರ್ಹಾನ್ ವನಿ ಹತ್ಯೆ ವಿರೋಧಿಸಿ ಪಾಕಿಸ್ತಾನ ಜುಲೈ 20ರಂದು ಕರಾಳ ದಿನ ಆಚರಿಸಿದ್ದಕ್ಕೆ ಭಾರತ ಕಟು ಶಬ್ದಗಳಿಂದ ಟೀಕಿಸಿದ್ದು, ಕಾಶ್ಮೀರದಲ್ಲಿ ಪಾಕಿಸ್ತಾನವೇ ಉಗ್ರರನ್ನು ಬೆಂಬಲಿಸುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪಾಕಿಸ್ತಾನ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದಕ್ಕೆ ಮುನ್ನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಪಾಕಿಸ್ತಾನ ಮೊದಲು ಬಿಟ್ಟುಕೊಡಬೇಕು ಎಂದು ಹೇಳಿದೆ.