ಬೆಂಗಳೂರು : ಭಗವಂತನ ಮುಂದೆ ಬಾಗಿದವನು ಭಗವಂತನೇ ಆಗುವನು. ಹನುಮಂತ ರಾಮ ಚರಣದೆಡೆಗೆ ಬಾಗಿ ರಾಮ ಸೇವಕ ರೂಪದಲ್ಲಿ ಸ್ವಾಮಿಯಾದನು ಎಂದು 'ಒಡಲು' ಸಭಾಂಗಣದ 'ಮಡಿಲು' ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಹೇಳಿದರು.
ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ಗೋಕರ್ಣ ಉಪಾಧಿವಂತರುಗಳ ಸರ್ವಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗೋವುಗಳ ಬಣ್ಣ ಹಲವು ಆದರೆ ಹಾಲಿನ ಬಣ್ಣ ಸ್ವಚ್ಚ ಬಿಳಿ, ಹಾಗೆಯೇ ಸಂತ ಪರಂಪರೆ ಬೇರೆಬೇರೆಯಾದರೂ ಸಂತರು ನೀಡುವ ಉಪದೇಶ ಒಂದೇ. ಅದರಲ್ಲಿ ಭಿನ್ನತೆಯಿರದೇ ಜೀವಹಿತಕರವಾದ ಸಂದೇಶವಿರುತ್ತದೆ. ಗೋಮಾತೆಯ ಮೂಕಸೇವೆ ಮನುಕುಲಕ್ಕೆ ಜೀವಾಮೃತವಾಗಿದೆ. ಹಾಗೆಯೇ ಸದ್ದಿಲ್ಲದೆ ಗೋಸೇವಕರು ಮಾಡುವ ಸೇವೆಯನ್ನು ಸಮಾಜ ಗುರುತಿಸಬೇಕು. ಒಳಿತಿನ ಆಸೆ ಸಾಧನೆಗೆ ಪೂರಕವಾಗಿರುತ್ತದೆ. ಅಂತಹ ಆಸೆಯನ್ನು ಮಾಡಿ ಸಾಧಕರಾಗೋಣ ಎಂದು ಆಶೀರ್ವದಿಸಿದರು.
ಭಂಡಾರಕೇರಿಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಸಂತಸಂದೇಶ ನೀಡಿ, ಗೋವು ಕೇವಲ ರಾಷ್ಟ್ರಪ್ರಾಣಿ ಅಲ್ಲ, ರಾಷ್ಟ್ರ ಮಾತೆಯಾಗಬೇಕು. ಗೋವು ಜಗತ್ತಿನ ಆಧಾರಸ್ತಂಭಗಳಲ್ಲೊಂದು. ಭಾರತೀಯ ಗೋವಂಶ ಬಹಳ ಪಾವಿತ್ರ್ಯತೆಯಿಂದ ಕೂಡಿದೆ ಎಂದರು.
ಪದ್ಮಪುರಾಣದ ಆಯ್ದ ಶ್ಲೋಕವನ್ನು ಸಭೆಗೆ ಉಪದೇಶಿಸಿದ ಭಂಡಾರಕೇರಿಶ್ರೀಗಳು ಗೋಸಂರಕ್ಷಣೆ ಅಭಯಪ್ರದ, ಗೋಮಾರಾಟ ಮಹಾಪಾಪ. ಪರಿಸರ ರಕ್ಷಣೆ, ರೋಗರುಜಿನಗಳನ್ನು ಕಡಿಮೆ ಮಾಡುವ ಗೋವುಗಳ ಮಧ್ಯೆ ಬದುಕುವುದರಿಂದ ಬದುಕು ಬಂಗಾರವಾಗುತ್ತದೆ. ಭಾರತದ ಎಲ್ಲಾ ತಳಿಗಳನ್ನು ಸಂರಕ್ಷಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳು 'ಗೋಪಾಲೇಶ್ವರ'ರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಸೇವಕ ಪುರಸ್ಕಾರ ಸ್ವೀಕರಿಸಿದ ಡಾ. ಸುಬ್ಬಯ್ಯ, ಕೊಟ್ಟಿಗೆ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಇನ್ನೊರ್ವ ಗೋಸೇವಾ ಪುರಸ್ಕೃತ ಶ್ರೀಕಾಂತ ಬೆಟಗೇರಿ, ತಮ್ಮ ಟ್ರಸ್ಟ್ ಮೂಲಕ ಬುದ್ದಿಮಾಂದ್ಯ ಮಕ್ಕಳು ಗೋಶಾಲೆ ನಿರ್ವಹಿಸುತ್ತಿರುವ ಬಗ್ಗೆ ವಿವರಿಸಿದರು.
ಇದೇ ವೇಳೆ ಶ್ರೀಭಾರತೀಪ್ರಕಾಶನವು ಹೊರತಂದ ಕೃಷ್ಣಾನಂದ ಶರ್ಮಾ ಬರೆದ ಹನುಮದ್ವಿಕಾಸ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.
ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.