July 19, 2016
ಒಳಿತಿನ ಪ್ರವಾಹ ಕೆಡುಕನ್ನು ಕೊಚ್ಚಿಕೊಂಡು ಹೋಗುತ್ತದೆ : ರಾಘವೇಶ್ವರ ಶ್ರೀ
ನಂದಿಗೆ ವಸ್ತ್ರ ಧಾರಣೆ ಮಾಡಿ, ಗೋ ಚಾತುರ್ಮಾಸ್ಯಕ್ಕೆ ಚಾಲನೆ ನೀಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು
ಬೆಂಗಳೂರು : ಚಾತುರ್ಮಾಸ್ಯವೆಂದರೆ ಗುರುವಿಗೆ ವ್ರತ, ಶಿಷ್ಯರಿಗೆ ಹಬ್ಬ. ಅದು ಆನಂದ, ಅರಿವಿಗೆ ಪ್ರೇರಣೆ. ಶ್ರೀ ರಾಮಚಂದ್ರಾಪುರ ಮಠದಲ್ಲಿ ಪ್ರತಿ ವರ್ಷವೂ ಒಂದು ಧ್ಯೇಯವನ್ನಿಟ್ಟುಕೊಂಡು ಚಾತುರ್ಮಾಸ್ಯವನ್ನು ಆಚರಿಸಲಾಗುತ್ತದೆ. ಮಠ, ಗುರು, ಗೋವು ಸಮಾಜಕ್ಕೆ ಶುಭವನ್ನು ನೀಡುವತ್ತ ಲಕ್ಷ್ಯ ಹರಿಸುತ್ತದೆ. ಆಧ್ಯಾತ್ಮಿಕ ಧಾರ್ಮಿಕವಾದ ಚಾತುರ್ಮಾಸ್ಯಕ್ಕೆ ಕೆಡುಕನ್ನು ಬಯಸುವವರಿರುತ್ತಾರೆ. ಆದರೆ ಶಿಷ್ಯರು ಒಳಿತಿನತ್ತ ಗಮನಹರಿಸಬೇಕು. ಒಳಿತಿನ ಪ್ರವಾಹ ಕೆಡುಕನ್ನು ಕೊಚ್ಚಿಕೊಂಡುಹೋಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.
ಅವರು ಸೋಮವಾರ ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠ ರಾಮಾಶ್ರಮದ ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ರಾಘವೇಶ್ವರ ಶ್ರೀಗಳ 23ನೆಯ ಚಾತುರ್ಮಾಸ್ಯದಲ್ಲಿ ನಂದಿಗೆ ವಸ್ತ್ರ ಧಾರಣೆ ಮಾಡಿ, ಗೋ ಚಾತುರ್ಮಾಸ್ಯಕ್ಕೆ ಚಾಲನೆ ನೀಡಿ, ಸಭೆಯಲ್ಲಿ ಆಶೀರ್ವಚನ ನೀಡಿದರು.
ತಾಯಿಯ ಒಡಲು ಸರ್ವಶ್ರೇಷ್ಠ. ಆ ಗರ್ಭಗೃಹದಲ್ಲಿ ಆತ್ಮದರ್ಶನ, ದೇವದರ್ಶನವಾಗುತ್ತದೆ. ನೆಮ್ಮದಿಯನ್ನು ಕರುಣಿಸುತ್ತದೆ. ಅದೇ ರೀತಿ ಗೋವಿನ ಒಡಲು ಏನನ್ನೇ ಸ್ವೀಕರಿಸಿದರೂ ಅಮೃತವನ್ನು ನೀಡುತ್ತದೆ. ಸಕಾರಾತ್ಮಕ ಹಾಗೂ ಪರಿವರ್ತನೆಯ ಬದುಕನ್ನು ಪ್ರೇರೇಪಿಸುತ್ತದೆ. ಬದುಕಿಗೆ ಫಲವತ್ತತೆ ಬೇಕು ಅದು ಸಿಗುವುದು ಪುಣ್ಯ ಸನ್ನಿಧಿಗಳಲ್ಲಿ. ಅದಕ್ಕೆ ಮಠವು ತಾಯಿ ಮತ್ತು ಗೋವಿನ ವಾತ್ಸಲ್ಯವನ್ನು ಕರುಣಿಸುತ್ತದೆ. ಸತ್ಯವನ್ನು ಅರಿತು ಸತ್ವವನ್ನು ಬೆಳೆಸೋಣ. ಗೋ ಚಾತುರ್ಮಾಸ್ಯದ ಮೂಲಕ ಸಮಾಜಕ್ಕೆ ಗೋರೂಪ, ಗೋತತ್ವಗಳ ದರ್ಶನವಾಗಬೇಕು. ಗೋ ಸಂರಕ್ಷಣೆಯ ಕೂಗು ಹಬ್ಬಬೇಕು. ಕಾಮಧೇನು ಧ್ವಜ ದೆಹಲಿಯ ಕೆಂಪುಕೋಟೆಯಲ್ಲಿ ವಿಜೃಂಭಿಸುವಂತಾಗಬೇಕು. ಮಠದಲ್ಲಿ ಹಚ್ಚಿದ ಗೋಜ್ಯೋತಿ ವಿಶ್ವವನ್ನು ಬೆಳಗಲಿ. ರಾಮರಾಜ್ಯದ ಉದಯಕ್ಕೆ ಇದುವೇ ನಾಂದಿಯಾಗಲಿ ಎಂದು ಅವರು ಆಶಿಸಿದರು.
ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಆಶೀರ್ವಚನ
ಮಠ ಗುರುಕೇಂದ್ರಿತವೆಂದೇ ಪ್ರತೀತಿ. ಆದರೆ ಈ ಮಠವು ಶಿಷ್ಯರಿಗಾಗಿ ಮತ್ತು ಶಿಷ್ಯರ ಹಿತಚಿಂತನೆಗಾಗಿದೆ. ಆಳವಾಗಿ ಆಧ್ಯಯನ ಮಾಡಿದರೆ ಇದು ಶಿಷ್ಯಕೇಂದ್ರಿತವೇ ಆಗಿದೆ. ಮಠ ಆಡಳಿತ ಚಕ್ರವನ್ನು ಕಾರ್ಯಕರ್ತರೇ ನಡೆಸುತ್ತಾರೆ. ಮುಂದಿನ 3 ವರ್ಷಕ್ಕೆ ಶಾಸನತಂತ್ರದ ಪುನಾರಚನೆಯನ್ನು ಮಾಡಲಾಗಿದೆ. ಒಟ್ಟು 87 ವಿಭಾಗಗಳಲ್ಲಿ ಹಿರಿಯರು ಮತ್ತು ಹೆಚ್ಚು ಕ್ರಿಯಾಶೀಲ ಯುವಕರು ಸೇರಿಕೊಂಡಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭ ಪ್ರಕಾಶ್ ಭಟ್ ಮುಂಬಯಿ ಅವರ ಪ್ರಾಯೋಜಕತ್ವದಲ್ಲಿ ಪ್ರಸ್ತುತಿ ವಿಭಾಗ ಹೊರತಂದ ಗುರುಪೂರ್ಣಿಮೆಯ ಕುರಿತಾದ ದೃಶ್ಯರೂಪವನ್ನು, ಶ್ರೀಭಾರತೀಪ್ರಕಾಶನ ವಿಭಾಗ ಹೊರತಂದ ಪ್ರವಚನಮಾಲಿಕೆಯ ಭಾಗ 1 ರಿಂದ ಭಾಗ 7 ರವರೆಗಿನ ಧ್ವನಿಮುದ್ರಿಕೆಯನ್ನು, ಕುಮಾರಸ್ವಾಮಿ ವರ್ಮುಡಿ ಪ್ರಾಯೋಜಕತ್ವದಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಮುಕ್ತಕಗಳ ಸಂಕಲನ ವ್ಯೋಮ ಗೀತೆಯನ್ನು, ಅಂತರ್ಜಾಲ ವಿಭಾಗದವರು ಚಾತುರ್ಮಾಸ್ಯದ ಕಾರ್ಯಕ್ರಮಗಳನ್ನು ನೇರಪ್ರಸಾರ ನೀಡುವ www.srisamsthana.orgವನ್ನು ಶ್ರೀಗಳು ಬಿಡುಗಡೆಮಾಡಿದರು.
ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಲ್, ಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಎಲ್ಲಾ ಕಾರ್ಯದರ್ಶಿಗಳು, ಹವ್ಯಕ ಮಹಾಮಂಡಲದ ಪದಾಧಿಕಾರಿಗಳು, ಗೋ ಚಾತುರ್ಮಾಸ್ಯ ಸಮಿತಿ ಪದಾಧಿಕಾರಿಗಳು, ಉಪಸ್ಥಿತರಿದ್ದರು. ಗೋ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು. ಎಸ್. ಜಿ. ಭಟ್ ಸಭಾ ಪೂಜೆ ನೆರವೇರಿಸಿದರು. ಕೃಷ್ಣಾನಂದ ಶರ್ಮ ಅವರು ಕಾರ್ಯಕ್ರಮ ನಿರ್ವಹಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಪಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.