ನವದೆಹಲಿ : ಇಂದಿನಿಂದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.
ಕಾಶ್ಮೀರದಲ್ಲಿ ಉಂಟಾಗಿರುವ ಹಿಂಸಾಚಾರ, ಎನ್ ಎಸ್ ಜಿ ಸದಸ್ಯತ್ವ ಪಡೆಯುವಲ್ಲಿ ಕೇಂದ್ರದ ವೈಫಲ್ಯ, ಕೆಲವು ರಾಜ್ಯಗಳಲ್ಲಿನ ಪ್ರವಾಹದ ಬಗ್ಗೆ, ಕೃಷಿ ಸಮಸ್ಯೆಗಳು ಮತ್ತು ಭಯೋತ್ಪಾದನೆ, ಅರುಣಾಚಲ ಪ್ರದೇಶ, ಉತ್ತರಾಖಂಡ ವಿವಾದ ಮುಂತಾದ ವಿಚಾರಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಇತ್ತ ಕೇಂದ್ರ ಸರ್ಕಾರ ಮುಂಗಾರು ಅಧಿವೇಶನದಲ್ಲಿ ತನ್ನ ಮಹತ್ವಕಾಂಕ್ಷಿಯ ಸರಕು ಮತ್ತು ಸೇವೆಗಳ ಮಸೂದೆಗೆ (ಜಿಎಸ್ ಟಿ) ಅನುಮೋದನೆ ಪಡೆಯುವ ಯತ್ನದಲ್ಲಿದೆ. ಜಿಎಸ್ಟಿ ಮಸೂದೆ ಸೇರಿದಂತೆ 25 ಮಸೂದೆಗಳನ್ನು ಕಲಾಪ ಪಟ್ಟಿಯಲ್ಲಿರಿಸಿಕೊಂಡಿದ್ದು ಅವುಗಳನ್ನು ಪಾಸ್ ಮಾಡಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಹಕಾರ ಕೋರಿದೆ.
ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸರ್ವ ಪಕ್ಷ ಸಭೆಯನ್ನು ಕರೆದಿದ್ದು ,ಸದನದ ಸುಗಮ ಕಲಾಪಕ್ಕೆ ಅವಕಾಶ ಮಾಡುವಂತೆ ಕೋರಿದ್ದಾರೆ. ಸಭೆಯಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅಂಗೀಕಾರಗೊಳ್ಳುವ ಮಸೂದೆಗಳ ಕೀರ್ತಿ ಯಾವ ಸರ್ಕಾರಕ್ಕೆ ಸಲ್ಲುತ್ತದೆ ಎಂಬುದು ಮುಖ್ಯವಲ್ಲ. ಎಲ್ಲಾ ಪಕ್ಷಗಳು ಜನರನ್ನು ಪ್ರತಿನಿಧಿಸುತ್ತವೆ. ಎಲ್ಲಾ ವಿಷಯಗಳನ್ನು ಬದಿಗಿರಿಸಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡೋಣ ಎಂದು ಹೇಳಿದ್ದರು.
ಒಟ್ಟು 20 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಅಗಸ್ಟ್ 15 ರಂದ ಅಧಿವೇಶನ ಮುಕ್ತಾಯಗೊಳ್ಳುತ್ತದೆ.