ನವದೆಹಲಿ : ದಕ್ಷಿಣ ಸೂಡಾನ್ ನಲ್ಲಿ ಸಿಲುಕಿಯರ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆಪರೇಷನ್ ಸಂಕಟ ಮೋಚನ್ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಆಫ್ರಿಕಾದ ಯುದ್ಧಗ್ರಸ್ಥ ದಕ್ಷಿಣ ಸೂಡಾನ್ ನಲ್ಲಿ ಸಿಲುಕಿರುವ ನೂರಾರು ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಈ ಕಾರ್ಯಾಚರಣೆ ಆರಂಭಿಸಿದ್ದು, ಸಚಿವ ವಿ.ಕೆ.ಸಿಂಗ್ ನೇತೃತ್ವದಲ್ಲಿ 2 ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ವಿಮಾನಗಳು ಸೂಡಾನ್ ಗೆ ಪ್ರಯಾಣ ಬೆಳೆಸಿವೆ.
ನವದೆಹಲಿಯಿಂದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಮರ್ ಸಿನ್ಹಾ ನೇತೃತ್ವದಲ್ಲಿ ಭಾರತೀಯ ಅಧಿಕಾರಿಗಳ ತಂಡ ದಕ್ಷಿಣ ಸೂಡಾನ್ನ ಜುಬಾಗೆ ಪ್ರಯಾಣ ಬೆಳೆಸಿದೆ.
ದಕ್ಷಿಣ ಸೂಡಾನ್ನಲ್ಲಿ ಸುಮಾರು 500 ಭಾರತೀಯರಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗುವುದು. ಭಾರತೀಯ ವಿಮಾನಗಳು ಜುಬಾಗೆ ಗುರುವಾರ ಬೆಳಗ್ಗೆ 11 ಗಂಟೆ (ಸ್ಥಳೀಯ ಕಾಲಮಾನ) ತಲುಪಲಿದ್ದು, ಭಾರತೀಯ ನಾಗರಿಕರನ್ನು ಭಾರತಕ್ಕೆ ವಾಪಸ್ಸು ಕರೆತರಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ದಕ್ಷಿಣ ಸೂಡಾನ್ನಲ್ಲಿ ಆಂತರಿಕ ಗಲಭೆ ಉಂಟಾಗಿದ್ದು, ಈ ವರೆಗೆ ನೂರಾರು ಜನರು ಗಲಭೆಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿಯರು ದೇಶ ತೊರೆಯುತ್ತಿದ್ದಾರೆ.