ನವದೆಹಲಿ : ಪ್ರಚಾರದ ಗೀಳು ಒಳ್ಳೆಯದಲ್ಲ. ಇದು ಇಮೇಜ್ ಕೆಡಿಸುತ್ತದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ತಮ್ಮದೇ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿಗೆ ಪರೋಕ್ಷ ಚಾಟಿ ಬೀಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹಲವು ವಿಚಾರಗಳ ಬಗ್ಗೆ ವಿವರಿಸಿದರು. ರಾಜನ್ ದೇಶಭಕ್ತ. ಅವರ ದೇಶಪ್ರೇಮ ಯಾರಿಗೂ ಕಡಿಮೆ ಇಲ್ಲ. ಅವರ ವಿರುದ್ಧದ ಕಟು ಟೀಕೆ ಮೂಲಕ ಯಾರಾದರೂ ತಾವು ವ್ಯವಸ್ಥೆಗಿಂತ ಮೇಲು ಎಂದು ಅಂದುಕೊಂಡಿದ್ದರೆ ಅದು ತಪ್ಪು ಎಂದು ಟಾಂಗ್ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಗವರ್ನರ್ ರಘುರಾಂ ರಾಜನ್ ವಿರುದ್ಧ ಸರಣಿ ವಾಗ್ಧಾಳಿ ನಡೆಸಿದ್ದ ಪಕ್ಷದ ಹಿರಿಯ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರಿಗೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
'ನನ್ನ ರಾಜನ್ ಅವರ ಸಂಬಂಧ ಸುಮಧುರವಾಗಿದೆ. ಒಳ್ಳೇ ಕೆಲಸಗಳನ್ನು ಮಾಡಿದ್ದಾರೆ. ಜತೆಗೆ ಅವರ ದೇಶಭಕ್ತಿ ಕಡಿಮೆ ಏನಿಲ್ಲ. ಅವರು ಭಾರತವನ್ನು ಪ್ರೀತಿಸುತ್ತಾರೆ. ಅವರು ಎಲ್ಲಿದ್ದರೂ ಭಾರತದ ಸೇವೆ ಮಾಡುತ್ತಾರೆ. ಕಾರಣ ಅವರು ದೇಶಪ್ರೇಮಿ. ಅವರು ಪೂರ್ಣಾವಧಿ ಮುಗಿಸಲಿದ್ದಾರೆ' ಎಂದು ಹೇಳಿದ್ದಾರೆ.
ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚೀನಾದ ಜತೆಗೆ ಒಂದು ಸಮಸ್ಯೆಯಿಲ್ಲ, ಹಲವಾರು ಸಮಸ್ಯೆಗಳಿವೆ. ನಿಧಾನವಾಗಿ ಹಾಗೂ ಹಂತ ಹಂತವಾಗಿ ಮಾತುಕತೆ ಮೂಲಕ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಭಾರತದ ಜತೆಗೆ ಚೀನಾವು ಕೈ ಜೋಡಿಸಲಿದೆ ಎಂದರು.
ಎನ್ಎಸ್ಜಿ ಸದಸ್ಯತ್ವ ಪಡೆಯುವ ಕುರಿತಂತೆ ಪ್ರತಿಯೊಂದು ಸರ್ಕಾರವೂ ಪ್ರಯತ್ನವನ್ನು ನಡೆಸುತ್ತಾ ಬಂದಿದೆ. ನಮ್ಮ ಅವಧಿಯಲ್ಲಿ ಎಸ್ಸಿಒ ಸದಸ್ಯತ್ವ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ನಮಗೆ ಎಂಟಿಸಿಆರ್ ಸದಸ್ಯತ್ವವೂ ಸಿಕ್ಕಿದೆ. ಎನ್ಎಸ್ಜಿ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ನಾವು ಎಲ್ಲರ ಜತೆಗೂ ಹೊಂದಿಕೊಂಡು ಕೆಲಸ ಮಾಡಲಿದ್ದೇವೆ. ಈಗಷ್ಟೇ ಕೆಲಸ ಆರಂಭವಾಗಿದ್ದು, ಧನಾತ್ಮಕವಾದ ಫಲಿತಾಂಶ ಬರಲಿದೆ ಎಂದು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದರು.
ಪಾಕಿಸ್ತಾನದ ವಿಚಾರದಲ್ಲಿ ಪ್ರತಿಕ್ಷಣವೂ ಎಚ್ಚರಿಕೆಯಿಂದಿರುತ್ತೇವೆ. ಈ ವಿಷಯದಲ್ಲಿ ಸಡಿಲಗೊಳಿಸುವ ಪ್ರಶ್ನೆಯೇ ಇಲ್ಲ. ಲಾಹೋರ್ ಗೆ ಭೇಟಿ ನೀಡಿದ್ದರಿಂದ ಭಾರತದ ಸ್ಥಾನಮಾನ ಹಾಗೂ ನಿಲುವು ಏನು ಎಂಬುದು ಜಗತ್ತಿಗೆ ಗೊತ್ತಾಗಿದೆ ಎಂದರು.
ಉತ್ತಮ ಆಡಳಿತ ನೀಡುವುದರ ಕಡೆಗೆ ನನ್ನ ಗಮನವಿದೆ. ಪದೇ ಪದೆ ಚುನಾವಣೆ ನಡೆಯುವುದರಿಂದಲೇ ದೇಶದ ಆರ್ಥಿಕತೆಗೆ ಹಿನ್ನಡೆ ಉಂಟಾಗುತ್ತದೆ. ಇದರಿಂದ ಜನಸಾಮಾನ್ಯರ ಬೇಡಿಕೆ, ನಿರೀಕ್ಷೆ ಈಡೇರಿಸಲು ಸರ್ಕಾರಗಳು ವಿಫಲ ವಾಗುತ್ತಿವೆ.