ಪುಣೆ : ಹೃದಯ ಶಸ್ತ್ರಚಿಕಿತ್ಸೆಗಾಗಿ ಹಣಕಾಸಿನ ನೆರವು ಕೋರಿ ಪ್ರಧಾನಿ ಕಛೇರಿಗೆ ಪತ್ರ ಬರೆದು, ಸರ್ಕಾರದ ಸಹಾಯದಿಂದ ಶಶ್ತ್ರಚಿಕಿತ್ಸೆ ಪಡೆದಿರುವ ೬ ವರ್ಷದ ಬಾಲಕಿ ವೈಶಾಲಿ ಹಾಗೂ ಕುಟುಂಬಸ್ಥರನ್ನು ಪ್ರಧಾನಿ ನರೇಂದ್ರ ಮೋದಿ ಪುಣೆಯಲ್ಲಿ ಭೇಟಿಯಾದರು.
ವೈಶಾಲಿಗೆ ನೀಡಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಶಸ್ತ್ರ ಚಿಕಿತ್ಸೆ ಬಳಿಕ ವೈಶಾಲಿ ಬರೆದ ಪತ್ರವು ನನ್ನ ಮನಸ್ಸಿನ ಮೇಲೆ ಆಳವಾಗಿ ಪ್ರಭಾವ ಬೀರಿದೆ ಎಂದು ಟ್ವೀಟರ್ನಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹದಪ್ಸರ್ ನ ಆರು ವರ್ಷದ ಬಾಲಕಿ ವೈಶಾಲಿ ಯಾದವ್ ಬಡಕುಟುಂಬದವಳು. ಈಕೆಯ ಹೃದಯದಲ್ಲಿ ರಂಧ್ರವಿತ್ತು. ಸರ್ಜರಿ ಮಾಡಿಸಲು ಕುಟುಂಬದಲ್ಲಿ ಹಣವಿರಲಿಲ್ಲ. ಈಕೆಯ ತಂದೆ ವೃತ್ತಿಯಲ್ಲಿ ಪೇಂಟರ್. ಮಗಳ ಹೃದಯ ಚಿಕಿತ್ಸೆಗೆ ಮೂರು ಲಕ್ಷ ರೂ ಅಗತ್ಯವಿತ್ತು. ಆದರೆ ಈ ಖರ್ಚನ್ನು ಭರಿಸಲಾಗದೆ ತಂದೆ ಆಕೆಯ ಆಟಿಕೆಯ ಸಾಮಾನು, ಬೈಸಿಕಲ್ ಇತ್ಯಾದಿಗಳನ್ನು ಮಾರಿ ಆಕೆಗಾಗಿ ಔಷಧ ಖರೀದಿಸಿ ತರುತ್ತಿದ್ದ.
ಇದರಿಂದ ಆರ್ಥಿಕ ನೆರವು ಕೋರಿ ಬಾಲಕಿಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಶಾಲೆಯ ಗುರುತು ಪತ್ರವನ್ನು ಜೊತೆಗಿಟ್ಟು ಪ್ರಧಾನ ಮಂತ್ರಿ ಕಚೇರಿಗೆ ಪೋಸ್ಟ್ ಮಾಡಿದ್ದಳು. ಪತ್ರ ಕಳುಹಿಸಿದ ಐದನೇ ದಿನಕ್ಕೆ ಪ್ರಧಾನಿ ಕಡೆಯಿಂದ ಬಾಲಕಿಗೆ ಉತ್ತರ ಬಂತು.
ಪ್ರಧಾನಿ ಸಚಿವಾಲಯದ ಅಧಿಕಾರಿಗಳ ಆದೇಶದಂತೆ ಪುಣೆ ಜಿಲ್ಲಾಧಿಕಾರಿ ಆಸ್ಪತ್ರೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ವೈಶಾಲಿಗೆ ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಉಚಿತ ಶಸ್ತ್ರಚಿಕಿತ್ಸೆಗೆ ಏರ್ಪಾಡು ಮಾಡಲಾಯಿತು. ಜೂನ್ 4ರಂದು ಉಚಿತವಾಗಿ ಶಸ್ತ್ರಚಿಕಿತ್ಸೆ ಪಡೆದ ವೈಶಾಲಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ.