ಲಖ್ನೌ : ಯೋಗ ಸಕಲ ರೋಗಕ್ಕೂ ದಿವ್ಯೌಷಧ, ಇದು ಭಾರತೀಯ ಸಂಸ್ಕೃತಿಯ ಆಸ್ತಿಯಾಗಿ ಈಗ ವಿಶ್ವಕ್ಕೆ ಪರಿಚಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಲಖ್ನೌ ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಕಲ ರೋಗಕ್ಕೂ ಯೋಗ ಜೌಷಧವಾದ ಕಾರಣ ಇದನ್ನು ಧರ್ಮದ ಹಿನ್ನಲೆಯಲ್ಲಿ ನೋಡದೇ ಆರೋಗ್ಯದ ದೃಷ್ಠಿಯಿಂದ ನೋಡುವಂತೆ ಕರೆ ನೀಡಿದರು.
ದೇಹ, ಬುದ್ಧಿ ಹಾಗೂ ಆತ್ಮಕ್ಕೆ ಕೊಂಡಿಯಾಗಿ ಯೋಗ ಕಾರ್ಯನಿರ್ವಹಿಸುತ್ತದೆ. ಯೋಗವನ್ನು 41 ಇಸ್ಲಾಂ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಯೋಗದಲ್ಲಿ ಹುದುಗಿರುವುದು ಜಾತೀಯತೆ ಅಲ್ಲ ಮಾನವೀಯತೆ ಎನ್ನುವುದನ್ನು ನಾವೆಲ್ಲ ಅರಿಯ ಬೇಕಿದೆ ಎಂದು ಹೇಳಿದರು.
ಕಳೆದ ವರ್ಷ ಸುಮಾರು 191 ದೇಶಗಳು ಯೋಗವನ್ನು ಆಚರಿಸಿ ಇದರ ಮಹತ್ವವನ್ನು ಕಂಡುಕೊಂಡಿವೆ. ಆದ್ದರಿಂದ ಇದೀಗ ಇಡೀ ವಿಶ್ವವೇ ಭಾರತವನ್ನು ನೋಡುತ್ತಿದೆ. ಯೋಗದ ವಿಚಾರವಾಗಿ ಕೆಲವರು ಇಲ್ಲ ಸಲ್ಲದ ವಿವಾದಗಳನ್ನು ಎಬ್ಬಿಸಿದ್ದರು ಇದು ಸರಿಯಲ್ಲ, ಅಂತಹ ವಿವಾದಗಳಿಗೆ ಹೆಚ್ಚಿನ ಗಮನ ಕೊಡದೆ ಮುಂದೆಸಾಗಬೇಕು ಎಂದು ಹೇಳಿದರು.
ಇದೇ ವೇಳೆ ರಾಜನಾಥ್ ಸಿಂಗ್ ಸ್ವತ: ಯೋಗಾಸನಗಳನ್ನು ಮಾಡುವ ಮೂಲಕ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.