ನವದೆಹಲಿ : 2014ರ ಸೆಪ್ಟೆಂಬರ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಪ್ರಸ್ತಾಪಿಸಿದಾಗ ವಿದೇಶಗಳಿಂದ ಇಷ್ಟು ಪ್ರಮಾಣದ ಉತ್ಸಾಹ ಕಂಡುಬರಬಹುದೆಂಬ ನಿರೀಕ್ಷೆಯಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ನವದೆಹಲಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಗೆ ಸಿಗುತ್ತಿರುವ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದರು.
ಕಳೆದ ವರ್ಷ ವಿಶ್ವಾದ್ಯಂತ ಯೋಗ ದಿನಾಚರಣೆಯನ್ನು ಒಗ್ಗಟ್ಟಾಗಿ ಆಚರಿಸಲಾಗಿತ್ತು. ಈ ವರ್ಷ ಮತ್ತೆ ಅಂತಹದ್ದೇ ವಾತಾವರಣ ನಿರ್ವಣವಾಗುವ ನಿರೀಕ್ಷೆಯಿದೆ. ಈ ಮೂಲಕ ಪ್ರಾಚೀನ ಪರಿಕಲ್ಪನೆಯಾದ ವಸುಧೈವ ಕುಟುಂಬಕಂ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಚಂಡೀಗಢದಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದರೆ, 57 ಕೇಂದ್ರ ಸಚಿವರು ದೇಶದ ವಿವಿಧೆಡೆ ನಡೆಯಲಿರುವ ಯೋಗ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.
ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ಸ್ಮೃತಿ ಇರಾನಿ ಸೇರಿ ಹಲವು ಸಚಿವರು ವಿವಿಧ ರಾಜ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಉತ್ತರಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ, ನಿರ್ಮಲಾ ಸೀತಾರಾಮನ್ ಮತ್ತು ಮೇನಕಾ ಗಾಂಧಿ ಸೇರಿ 10 ಸಚಿವರು ಅಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಂದಾಳತ್ವವನ್ನು ಜೇಟ್ಲಿ, ಆಂಧ್ರಪ್ರದೇಶದ ವಿಜಯವಾಡದಲ್ಲಿ ಸುರೇಶ್ಪ್ರಭು ವಹಿಸಲಿ ದ್ದಾರೆ. ಮನೋಹರ್ ಪರಿಕ್ಕರ್ ಕಾನ್ಪುರ, ವೆಂಕಯ್ಯ ನಾಯ್ಡು ನವದೆಹಲಿ, ಪಿಯೂಷ್ ಗೋಯಲ್ ರಾಯ್ಪುರ ಮತ್ತು ಜೆ.ಪಿ. ನಡ್ಡಾ ಅಹಮದಾಬಾದ್ನಲ್ಲಿ ಯೋಗ ಮಾಡಲಿದ್ದಾರೆ.