ಬೆಂಗಳೂರು : ಗಿರಿನಗರದ ಶ್ರೀ ರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶಾಸನತಂತ್ರ ವ್ಯವಸ್ಥೆ- ರಾಮರಾಜ್ಯ ಹಾಗೂ ಮಹಾಮಂಡಲದ ಪುನಾರಚನೆ ಸಂಪನ್ನವಾಯಿತು.
ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು, ಶ್ರೀಮಠದ ಸಮಾಜಮುಖೀ ಕಾರ್ಯಗಳನ್ನು ನಿರ್ವಹಿಸಲು ಕೆಲಸದ ಮೇಲೆ ಪ್ರೇಮ ಹಾಗು ಫ್ರೇಮ್(ಚೌಕಟ್ಟು) ಬೇಕು ಎಂಬ ಕಾರಣಕ್ಕಾಗಿ ಶಾಸನತಂತ್ರ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮಠದ ವ್ಯವಸ್ಥೆ ನಿಂತ ನೀರಾಗಬಾರದು ಎಂಬ ಕಾರಣಕ್ಕಾಗಿ ವ್ಯವಸ್ಥೆಯನ್ನು ಪುನಾರಚಿಸಲಾಗಿದೆ. ಕಳೆದ 2-3 ವರ್ಷಗಳಿಂದ ಮಠ ಎದುರಿಸುತ್ತಿರುವ ಸವಾಲುಗಳಿಂದಾಗಿ ಹಲವು ದಕ್ಷರಾದ ಕಾರ್ಯಕರ್ತರು ಸಿಗುವಂತೆ ಮಾಡಿದ್ದು, ಹಿರಿಯರ ಜೊತೆ ಅನೇಕ ಉತ್ಸಾಹಿ ಯುವಮುಖಗಳು ವ್ಯವಸ್ಥೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶ್ರೀಮಠದ ಲೋಕಹಿತ ಕಾರ್ಯಗಳು ಈ ವ್ಯವಸ್ಥೆಯಿಂದ ಉತ್ತಮರೀತಿಯಲ್ಲಿ ಸಂಪನ್ನವಾಗಲಿ ಎಂದು ಆಶಿಸಿದರು.
ಹಿರಿಯರು, ಅನುಭವಿಗಳು ಹಾಗೂ ಯುವಕರಿಂದ ಕೂಡಿದ ಶಾಸನತಂತ್ರ ವ್ಯವಸ್ಥೆ ಇದಾಗಿದ್ದು, ಶ್ರೀಮಠದ ಸಮ್ಮುಖಸರ್ವಾಧಿಕಾರಿಗಳಾಗಿ ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ತಿಮ್ಮಪ್ಪಯ್ಯ ಮಡಿಯಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿವೃತ್ತ ಪೋಲೀಸ್ ಅಧೀಕ್ಷಕರಾದ ಕೆ ಜಿ ಭಟ್, ಕಾರ್ಯದರ್ಶಿ -ಶ್ರೀನಿರ್ದೇಶ ಜಯರಾಮ್ ಕೋರಿಕ್ಕಾರ್ ಹಾಗು ಗಣೇಶ್ ಜೆ ಎಲ್, ಆರ್ಥಿಕ ಕಾರ್ಯದರ್ಶಿಗಳಾಗಿ ಮೋಹನ ಹೆಗಡೆ, ಲೇಖ ಕಾರ್ಯದರ್ಶಿಗಳಾಗಿ ಆರ್ ಡಿ ಶಾಸ್ರ್ತಿ, ಗಣ್ಯ ಸಂಪರ್ಕ ಕಾರ್ಯದರ್ಶಿಗಳಾಗಿ ಕೆಕ್ಕಾರು ರಾಮಚಂದ್ರ ಭಟ್, ಕಾಮದುಘಾ ಕಾರ್ಯದರ್ಶಿಗಳಾಗಿ ಡಾ ವೈ ವಿ ಕೃಷ್ಣಮೂರ್ತಿ, ಗೋಶಾಲಾ ಕಾರ್ಯದರ್ಶಿಗಳಾಗಿ ಡಾ ಶಾರದಾ ಜಯಗೋವಿಂದ, ಪ್ರಕಾಶನ ಕಾರ್ಯದರ್ಶಿಗಳಾಗಿ ಡಾ ಗಜಾನನ ಶರ್ಮ, ಶ್ರೀವಿಶ್ವಕೋಶ ಕಾರ್ಯದರ್ಶಿಗಳಾಗಿ ವಿದ್ವಾನ್ ಜಗದೀಶ ಶರ್ಮ, ವಿದ್ಯಾ ಕಾರ್ಯದರ್ಶಿಗಳಾಗಿ ಪ್ರಮೋದ್ ಪಂಡಿತ್, ಉಲ್ಲೇಖ ಕಾರ್ಯದರ್ಶಿಗಳಾಗಿ ಗೋವಿಂದರಾಜ್ ಕೋರಿಕ್ಕಾರ್, ಗ್ರಾಮರಾಜ್ಯ ಕಾರ್ಯದರ್ಶಿಗಳಾಗಿ ಕೃಷ್ಣಪ್ರಸಾದ್ ಅಮ್ಮಂಕಲ್ಲು, ಮಾಧ್ಯಮ ಕಾರ್ಯದರ್ಶಿಗಳಾಗಿ ರಾಮಚಂದ್ರ ಅಜ್ಜಕಾನ, ಅಂತರ್ಜಾಲ ಕಾರ್ಯದರ್ಶಿಗಳಾಗಿ ಸತ್ಯನಾರಾಯಣ ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷರಾಗಿ ಶ್ರೀಮತಿ ಈಶ್ವರೀ ಬೇರ್ಕಡವು, ಕಾರ್ಯದರ್ಶಿಗಳಾಗಿ ಹರಿಪ್ರಸಾದ್ ಪೆರಿಯಪ್ಪು, ಮೂಲಮಠ ಅಶೋಕೆ ಅಧ್ಯಕ್ಷರಾಗಿ ಆರ್ ಎಸ್ ಹೆಗಡೆ ಹರಗಿ, ಶಿಷ್ಯಭಾವ ಕಾರ್ಯದರ್ಶಿಗಳಾಗಿ ಶ್ರೀಮತಿ ಅನುರಾಧಾಪಾರ್ವತಿ ಹಾಗೂ ಮಹಾನಂದಿ ಗೋಲೋಕದ ಅಧ್ಯಕ್ಷರಾಗಿ ಕೃಷ್ಣಪ್ರಸಾದ್ ಎಡಪ್ಪಾಡಿ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಇವರ ಕಾರ್ಯಾವಧಿ ಗುರುಪೂರ್ಣಿಮೆ ದಿನದಿಂದ ಮೂರು ವರ್ಷಗಳದ್ದಾಗಿರುತ್ತದೆ.
ಇದೇ ಸಂದರ್ಭದಲ್ಲಿ ಈ ವರ್ಷದ ಚಾತುರ್ಮಾಸ್ಯವನ್ನು ಶ್ರೀಮಠದ ಬೆಂಗಳೂರಿನ ಶಾಖಾಮಠದಲ್ಲಿ ಗೋ ಚಾತುರ್ಮಾಸ್ಯವಾಗಿ ನಡೆಸಲು ನಿರ್ಧರಿಸಲಾಯಿತು. ಗೋ ಚಾತುರ್ಮಾಸ್ಯದಲ್ಲಿ ಪ್ರತಿದಿನವೂ ಗೋವಿಗೆ ಸಂಭಂದಿಸಿ ವಿಶಿಷ್ಟ ಕಾರ್ಯಕ್ರಮಗಳು ಸಂಪನ್ನವಾಗಲಿವೆ.