ಮುಂಬೈ : ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮಹರಾಷ್ಟ್ರ ಬಿಜೆಪಿ ಸರ್ಕಾರದ ಕಂದಾಯ ಸಚಿವ ಏಕನಾಥ್ ಖಡ್ಸೆ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರ, ಭೂ ಹಗರಣ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ನಂಟು ಹೊಂದಿದ ಆರೋಪಕ್ಕೆ ಸಿಲುಕಿದ್ದ ಏಕನಾಥ್ ಖಡ್ಸೆ ರಾಜೀನಾಮೆ ಅಂಗೀಕಾರವಾಗಿದೆ. ಅವರ ವಿರುದ್ಧದ ಆರೋಪಗಳ ತನಿಖೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಉತ್ತರ ಮಹಾರಾಷ್ಟ್ರದ ಪ್ರಭಾವಿ ನಾಯಕ ಹಾಗೂ ಒಬಿಸಿ ಸಮದಾಯದ ಖಡ್ಸೆ ರಾಜೀನಾಮೆ ಬೆನ್ನಲ್ಲೇ ಅವರ ಬೆಂಬಲಿಗರು ಜಲಗಾಂವ್ನಲ್ಲಿ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಈ ನಡುವೆ, ಖಡ್ಸೆ ಪದತ್ಯಾಗಕ್ಕಾಗಿ ಆಗ್ರಹಿಸಿ 3 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆಪ್ ನಾಯಕಿ ಅಂಜಲಿ ದಮಾನಿಯಾ, ಪ್ರಕರಣದ ಉನ್ನತ ತನಿಖೆಗೆ ಒತ್ತಾಯಿಸಿ ನಿರಶನ ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಕೂಡ ಅತ್ಯುನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಈ ಬಗ್ಗೆ ಮಾತನಾಡಿರುವ ಏಕನಾಥ್ ಖಡ್ಸೆ, ನನ್ನ ವಿರುದ್ಧ ಮಾಡಿರುವ ಆಧಾರರಹಿತ ಆರೋಪಕ್ಕೆ ಪಕ್ಷ ದೃಢ ಬೆಂಬಲವಾಗಿ ನಿಂತಿದ್ದರೂ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ರಾಜಿನಾಮೆ ಕೊಟ್ಟಿದ್ದೇನೆ. 40 ವರ್ಷದ ಬದುಕಿನಲ್ಲಿ ಈ ರೀತಿ ಮಾಧ್ಯಮ ವಿಚಾರಣೆಯನ್ನು ಎಂದೂ ಎದುರಿಸಿರಲಿಲ್ಲ ಎಂದು ಹೇಳಿದ್ದಾರೆ.