ಬೆಂಗಳೂರು : ಜೂನ್ ೪ರಂದು ಪೊಲೀಸರು ಕೆಲಸಕ್ಕೆ ಗೈರುಹಾಜರಾಗಿ ಪ್ರತಿಭಟನೆ ನಡೆಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ತಮಗೆ ಬಂದಿರುವ ಮಾಹಿತಿ ಪ್ರಕಾರ ಜೂನ್ ೪ರಂದು ಪೊಲೀಸರು ಪ್ರತಿಭಟನೆ ನಡೆಸುತ್ತಿಲ್ಲ. ಈಗಾಗಲೇ ರಜೆಗೆ ಅರ್ಜಿ ಸಲ್ಲಿಸಿದವರೂ ವಾಪಸ್ ಪಡೆದಿದ್ದಾರೆ ಎಂದು ತಿಳಿಸಿದರು.
ಪೊಲೀಸರಾಗಲಿ, ಪೋಲಿಸರ ಕುಟುಂಬ ಸದಸ್ಯರು ಪ್ರತಿಭಟನೆ ಮಾಡುವಂತಿಲ್ಲ; ಮಾಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಕ್ವಾಟ್ರಸ್ ನಲ್ಲಿದ್ದವರು ಪ್ರತಿಭಟನೆ ನಡೆಸಿದರೆ ಕೂಡಲೇ ಮನೆ ಖಾಲಿ ಮಾಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪೊಲೀಸರಿಗೆ ವಾರದ ರಜೆ ಕಡ್ಡಾಯ ,ಪಡಿತರ ನೀಡುವ ಬದಲು ಹಣ ನೀಡಲು ಕೇಳಿದ್ದಾರೆ, ಒತ್ತಡ ಇಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.