Sullia : ಅಜ್ಞಾನ, ಭಯ, ಸಂದೇಹ, ಅನುಮಾನಗಳನ್ನು ಬಿಟ್ಟು ಜ್ಞಾನ ಸಂಗ್ರಹದಲ್ಲಿ ನಾವು ನಿರಂತರವಾಗಿ ತೊಡಗಿಕೊಳ್ಳಬೇಕು. ಕಲಿತ ವಿಷಯಗಳನ್ನು ಜ್ಞಾನವಾಗಿಸಿಕೊಳ್ಳಬೇಕು. ಪರಸ್ಪರ ಸಹಕಾರ ಮತ್ತು ಸ್ವಪ್ರಯತ್ನ ಇದ್ದಾಗ ಸಾಧನೆ ಸಾಧ್ಯ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.
ಅವರು ಸೋಮವಾರ ಸ್ನೇಹ ಸಂಸ್ಥೆಯಲ್ಲಿ 2015-16ನೇ ಸಾಲಿನ ಎಸ್.ಎಸ್.ಎಲ್.ಸಿ. ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆಯವರು ಮಾತನಾಡಿ ಸ್ನೇಹ ಶಾಲೆಯಲ್ಲಿ ನೀವು ಕಲಿತ ಉತ್ತಮ ನಡತೆಯನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಎಸ್. ಎಲ್. ಸಿ ಉನ್ನತ ಮಟ್ಟದ ಸಾಧನೆ ಗೈದ 25 ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಪುಸ್ತಕ ನೀಡಿ ಸನ್ಮಾನಿಸಲಾಯಿತು.
ಪೋಷಕರ ಪರವಾಗಿ ಶ್ರೀ ಮಾಧವ ಭಟ್ ತಮ್ಮ ಮನದಾಳದ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ವೈಶಾಖ್ ಎಂ. ಎಸ್., ಅನು ಡಿ. ಹಾಗೂ ವೈಷ್ಣವಿ ಎಂ. ಎಸ್.ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ 'ಯಶಸ್ಸು ಆಸೆಯ ಕನಸಲ್ಲ, ಪ್ರಾಮಾಣಿಕ ಪ್ರಯತ್ನದ ಫಲ' ಎಂದರು.
ಶಿಕ್ಷಕ ರಘುರಾಮ ಭಟ್ ಸಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪವಿತ್ರ ಧನ್ಯವಾದವಿತ್ತರು. ಶಿಕ್ಷಕಿ ಕುಮಾರಿ ದಿವ್ಯಾ ನಿರೂಪಿಸಿದರು.
ಸ್ನೇಹ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
2016-17 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 30 ರಂದು ಹೊಸ ವಿದ್ಯಾರ್ಥಿಗಳಿಗೆ ಅಕ್ಷರಭ್ಯಾಸ ಮಾಡಿಸುವುದರ ಮೂಲಕ ಪ್ರಾರಂಭಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಅಕ್ಷತೆಯಲ್ಲಿ ಅಕ್ಷರ ಬರೆಯಿಸುವ ಮೂಲಕ ಶುಭ ಹಾರೈಸಿದರು. ಅನಂತರ ಧ್ಯಾನ, ಸೂರ್ಯನ ಶ್ಲೋಕ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ನಂತರ ವಿದ್ಯಾರ್ಥಿಗಳಿಗೆ ದೃಶ್ಯ-ಶ್ರವಣ ಕೇಂದ್ರದಲ್ಲಿ ಸಿ.ಡಿ. ಪ್ರದರ್ಶನ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು.