ಉಜ್ಜೈನಿ : ಭಾರಿ ಗಾಳಿ, ಮಳೆಯ ಪರಿಣಾಮವಾಗಿ ಉಜ್ಜಯಿನಿ ಸಿಂಹಸ್ಥ ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, 7 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಕ್ತರಿಗಾಗಿ ಉಜ್ಜಯಿನಿಯ ಮೈದಾನದಲ್ಲಿ ಬೃಹತ್ ಪೆಂಡಾಲ್ ಗಳನ್ನು ಹಾಕಲಾಗಿದ್ದು ಭಾರೀ ಗಾಳಿ ಮಳೆಯ ಮಧ್ಯೆ ಪೆಂಡಾಲ್ ಒಂದು ಕುಸಿದ ಪರಿಣಾಮವಾಗಿ ಗಾಭರಿಗೊಂಡ ಭಕ್ತರು ಓಡತೊಡಗಿದಾಗ ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗಿದೆ.
ಗಂಭೀರ ಗಾಯಗೊಂಡಿರುವ ಭಕ್ತಾದಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಜ್ಜಯಿನಿಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಭಾಗಿಯಾಗುತ್ತಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು. ಅವರ ಚಿಕಿತ್ಸೆಗೆ ಸರ್ಕಾರವೇ ಹಣ ನೀಡಲಿದೆ ಎಂದು ಈ ಸಮಯದಲ್ಲು ಘೋಷಿಸಿದರು. ಘಟನೆಯಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ನಗದು, 2ಲಕ್ಷ ವಿಮೆ, ತೀವ್ರ ಗಾಯಗೊಂಡವರಿಗೆ 50 ಸಾವಿರ ಮತ್ತು ಗಾಯಗೊಂಡವರಿಗೆ 10 ಸಾವಿರ ಪರಿಹಾರ ಧನ ನೀಡುವುದಾಗಿ ಹೇಳಿದರು.