ಕಾಶ್ಮೀರ : ಗಡಿ ನಿಯಂತ್ರಣ ರೇಖೆಯಾಚೆಗೆ ನಡೆಸಲಾಗುತ್ತಿರುವ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತೆ ಭಾರತ, ಚೀನಾಗೆ ಸ್ಪಷ್ಟವಾಗಿ ಹೇಳಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯಾಚೆ, ಚೀನಾ ರಸ್ತೆಗಳು, ಸೇತುವೆಗಳು ಮತ್ತು ಜಲ ವಿದ್ಯುತ್ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕಾರ್ಯಗತಗೊಳಿಸುತ್ತಿದೆ ಎಂಬ ವರದಿಗಳನ್ನು ಅನುಸರಿಸಿ ಭಾರತ ಕಾಮಗಾರಿ ನಿಲ್ಲಿಸುವಂತೆ ಹೇಳಿದೆ.
ಭಾರತವು ಚೀನಕ್ಕೆ ತನ್ನ ಕಳವಳವನ್ನು ಔಪಚಾರಿಕವಾಗಿ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಚೀನವು ನೇರವಾಗಿ ಶಾಮೀಲಾಗಿರುವ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡಿದೆ ಎಂದು ಉಧಾಮ್ ಪುರದಲ್ಲಿ ಪ್ರಧಾನ ಕಾರ್ಯಾಲಯವನ್ನು ಹೊಂದಿರುವ ನಾರ್ದರ್ನ್ ಕಮಾಂಡ್ ನ ರಕ್ಷಣಾ ವಕ್ತಾರ ಕರ್ನಲ್ ಎಸ್ ಡಿ ಗೋಸ್ವಾಮಿ ತಿಳಿಸಿದ್ದಾರೆ.
ಚೀನದ ಗೆಝೋಬಾ ಗ್ರೂಪ್ ಕಂಪೆನಿಯು 2007ರಿಂದ ಪಿಓಕೆಯಲ್ಲಿ 970 ಮೆಗಾವಾಟ್ ಝೀಲಂ - ನೀಲಂ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸುವಲ್ಲಿ ತೊಡಗಿಕೊಂಡಿದೆ. ಈ ವರ್ಷ ಈ ಜಲ ವಿದ್ಯುತ್ ಯೋಜನೆಯು ಪೂರ್ಣಗೊಳ್ಳಲಿದೆ. ಇದೇ ವೇಳೆ ಚೀನವು ಗಿಲ್ಗಿಟ್ - ಬಾಲ್ಟಿಸ್ಥಾನದೊಂದಿಗಿನ ಕಾರಕೋರಂ ಹೆದ್ದಾರಿಯನ್ನು ಸಂಪರ್ಕಿಸುವ ಸರ್ವ ಋತು ರಸ್ತೆಯೊಂದನ್ನು ನಿರ್ಮಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ, ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಸ್ಪಷ್ಟಪಡಿಸಿದೆ.