ಮೈಸೂರು : ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ಥಾನದ ದುಂಗಾಪುರ ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಸಿಂಗ್ ಅವರ ವಿವಾಹ ಮಹೋತ್ಸವ ಜೂ.27 ಹಾಗೂ 28 ರಂದು ನಡೆಯಲಿದೆ.
ರಾಜ್ಯದ ಜನತೆ ಹಲವು ದಿನಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮೈಸೂರು ರಾಜ ಮನೆತನದ ಈ ವಿವಾಹ ಮಹೋತ್ಸವಕ್ಕೆ ಮೈಸೂರಿನ ಅಂಬಾ ವಿಲಾಸ ಅರಮನೆ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ.
ಈ ಅದ್ಧೂರಿ ವಿವಾಹಕ್ಕೆ ರಾಜ ಮನೆತನದ ಸದಸ್ಯರು ಮತ್ತು ಗಣ್ಯರು ಹಾಗೂ ಅತೀ ಗಣ್ಯರು ಪಾಲ್ಗೋಳ್ಳಲಿದ್ದಾರೆ. ಇನ್ನೂ ಅರಮನೆಯ ಒಳಭಾಗದಲ್ಲಿರುವ ಗಣೇಶ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಅರಮನೆ ಪೂಜಾರಿಗಳೇ ವಿವಾಹದ ಎಲ್ಲಾ ವಿಧಿವಿಧಾನಗಳನ್ನ ನೇರವೇರಿಸಲಿದ್ದಾರೆ. ತ್ರಿಷಿಕಾ ಪೋಷಕರು ಕೂಡ ಈ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. 40 ವರ್ಷಗಳ ನಂತರ ಅರಮನೆಯಲ್ಲಿ ನಡೆಯುತ್ತಿರುವ ವಿವಾಹ ಇದಾಗಿದೆ.
ವಿವಾಹ ಮಹೋತ್ಸವದ ಲಗ್ನ ಕಟ್ಟುವ ಕಾರ್ಯ ಏ.25 ರಂದು ಅಂಬಾವಿಲಾಸ ಅರಮನೆಯಲ್ಲಿ ನೆರವೇರಿದ್ದು, ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕರ ಕಚೇರಿಮೇಲ್ಭಾಗದ ಚಾಮುಂಡಿ ತೊಟ್ಟಿಯಲ್ಲಿ ಅರಮನೆ ಪುರೋಹಿತರು ವಿಘ್ನೇಶ್ವರ, ತಾಯಿ ಚಾಮುಂಡೇಶ್ವರಿಗೆ ಪೂಜೆ ನೆರವೇರಿಸಿದರು.
ಬೆಳಗ್ಗೆ 10.15ರಿಂದ 10.45ರವರೆಗೆ ಮಿಥುನ ಶುಭಕಾಲದಲ್ಲಿ ಲಗ್ನ ಕಟ್ಟುವಕಾರ್ಯ ನಡೆಯಿತು. ಪತ್ರವೊಂದರ ಮೇಲೆ ಮುಹೂರ್ತ ಬರೆದು ಪೂಜೆ ಸಲ್ಲಿಸಲಾಯಿತು. ನಂತರ ವರ ಯದುವೀರ್ ಹಾಗೂ ವಧು ತ್ರಿಷಿಕಾ ಸಮ್ಮುಖದಲ್ಲಿಲಗ್ನಪತ್ರಿಕೆ ಓದಲಾಯಿತು. ಯದುವೀರ್ ಅವರ ತಾಯಿ ಪ್ರಮೋದಾದೇವಿ ಒಡೆಯರ್ ಹಾಗೂ ತ್ರಿಷಿಕಾ ಅವರ ತಂದೆ ಹರ್ಷವರ್ಧನ್ ಸಿಂಗ್, ತಾಯಿ ಮಹೇಶ್ರೀ ಕುಮಾರಿ ಲಗ್ನಪತ್ರಿಕೆಯನ್ನು ಫಲ, ತಾಂಬೂಲಗಳೊಂದಿಗೆ ವಿನಿಮಯ ಮಾಡಿಕೊಂಡರು.
ಮೈಸೂರು ಅರಸರ ರಾಜಗುರುಗಳಾದ ಪರಕಾಲ ಮಠದ ಶ್ರೀ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ ಅವರೊಂದಿಗೆ ಹಲವು ತಿಂಗಳ ಹಿಂದೆಯೇ ಮದುವೆ ವಿಷಯ ಚರ್ಚಿಸಲಾಗಿತ್ತು. ಅವರ ಸೂಚನೆಯಂತೆ ಪ್ರಮೋದಾದೇವಿ ಅವರು ಶೃಂಗೇರಿಗೆ ಭೇಟಿ ನೀಡಿ ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರಲ್ಲಿ ಶುಭ ದಿನಾಂಕ ನಿಗದಿ ಮಾಡಿಕೊಡುವಂತೆ ಕೋರಿದ್ದರು. ಉತ್ತರಾಯಣ ಕಾಲದ ಒಳಗೆ ಮದುವೆ ನೆರವೇರಿಸುವಂತೆ ಸೂಚಿಸಿದ್ದ ಶ್ರೀಗಳು, ಮೇ 10, 18, ಜೂ.27 ಸೇರಿ 5 ದಿನಾಂಕ ಬರೆದುಕೊಟ್ಟಿದ್ದರು. ಪರಕಾಲ ಮಠದ ಸ್ವಾಮೀಜಿ, ರಾಜಪುರೋಹಿತರೊಂದಿಗೆ ಚರ್ಚಿಸಿ ಶೃಂಗೇರಿ ಶ್ರೀಗಳ ಅಪ್ಪಣೆ ಪಡೆದು ಜೂ.27ರಂದು ಮುಹೂರ್ತ ನೆರವೇರಿಸಲು ನಿರ್ಧರಿಸಲಾಗಿಯಿತು.