ಬೆಂಗಳೂರು : ಮಕ್ಕಳಲ್ಲಿ ಕಲ್ಮಷ ಇರುವುದಿಲ್ಲ, ಮಕ್ಕಳ ಮನಸ್ಸು ಶುಭ್ರವಾದ ಬಿಳಿಹಾಳೆ ಇದ್ದಂತೆ, ಆ ನಿಷ್ಕಲ್ಮಷತೆಯೇ ದೇವರು. ಇಂದು ಪ್ರಪಂಚದಲ್ಲಿ ನಿಷ್ಕಲ್ಮಷತೆಯೊಂದನ್ನು ಹೊರತುಪಡಿಸಿ ಉಳಿದೆಲ್ಲವೂ ಸಿಗುತ್ತದೆ. ಸಂಸ್ಕಾರ ನೀಡುವ ಇಂತಹ ಶಿಬಿರಗಳ ಮೂಲಕ ನಿಷ್ಕಲ್ಮಷತೆಯನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ವಸಂತ ವಾತ್ಸಲ್ಯ- ಸಂಸ್ಕಾರದಾಯೀ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವಸಂತ ವಾತ್ಸಲ್ಯ ಶಬ್ದದಲ್ಲಿ ಸಂತ ಇದೆ. ಹಾಗೇ ವಸಂತ ವಾತ್ಸಲ್ಯ ಕಾರ್ಯಕ್ರಮದಲ್ಲಿ ಸಂತರಿದ್ದಾರೆ. ಇಂತಹ ಒಂದು ವಸಂತ ಕಾಲದಲ್ಲೇ ರಾಮನ ಅವತಾರದ ಮೂಲಕ ಜಗತ್ತಿಗೆ ಭಗವಂತನ ವಾತ್ಸಲ್ಯ ಸಿಕ್ಕಿತ್ತು. ಅಂತಹ ರಾಮನಿರುವ ರಾಮಚಂದ್ರಾಪುರ ಮಠದಲ್ಲಿ ನೀವೆಲ್ಲ ಇದ್ದೀರಿ. ಇಲ್ಲಿ ನಿಮಗೆ ರಾಮ, ಗುರು, ಗೋವು ಮತ್ತು ಮಕ್ಕಳು ಸಿಗುತ್ತಾರೆ. ರಾಮ, ಗುರು, ಗೋವು, ಮಕ್ಕಳು ಎಲ್ಲರೂ ದೇವರು. ಎಲ್ಲೂ ಕಲ್ಮಶವಿಲ್ಲ. ನಿಷ್ಕಲ್ಮಷತೆಯೇ ದೇವರು. ರಾಮ, ಗುರು, ಗೋವು ಮತ್ತು ಮಕ್ಕಳು ಈ ನಾಲ್ಕು ಬಗೆಯ ಸರ್ವಶ್ರೇಷ್ಠ ಸಹವಾಸದಲ್ಲಿ ಈ ಶಿಬಿರ ನಡೆಯಿತು. ಹೊಂದಾಣಿಕೆ, ಪ್ರೀತಿ-ವಿಶ್ವಾಸ, ಹಂಚಿ ತಿನ್ನುವ ಗುಣಗಳು ಇಂಥಾ ಶಿಬಿರಗಳಿಂದ ಬರುತ್ತದೆ. ಇದು ಜೀವನದ ಪಾಠವನ್ನು ಕಲಿಸುತ್ತದೆ. ಹೊಂದಾಣಿಕೆ ಹಾಗು ಪರಸ್ಪರ ಪ್ರೀತಿ ವಿಶ್ವಾಸಗಳ ಕೊರತೆಯಿಂದಾಗಿ ಇಂದು ಪ್ರಪಂಚದಲ್ಲಿ ಅನರ್ಥಗಳನ್ನು ನೋಡುತ್ತಿದ್ದೇವೆ. ಪ್ರೀತಿ, ಶಾಂತಿ, ಧರ್ಮ ಎಲ್ಲರಲ್ಲಿ ತುಂಬಲಿ, ಅವು ನಮ್ಮನ್ನಾಳುವಂತಾಗಲಿ ಎಂದು ಆಶಿಸಭರಒ.
ಎಲ್ಲರಲ್ಲಿ, ಎಲ್ಲ ಕಡೆ ಒಳಿತನ್ನು, ದೇವರನ್ನು ಕಾಣಿರಿ. ಆಗ ಮಾತ್ರ ದೇಶ ರಾಮರಾಜ್ಯವಾಗಲು ಸಾಧ್ಯ ಎಂಬ ಕಿವಿ ಮಾತನ್ನು ಹೇಳಿದ ಶ್ರೀಗಳು, ಶ್ರೀಮಠದ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಆಶೀರ್ವದಿಸಿದರು. ರಾಮರಕ್ಷಾ ಸ್ತೋತ್ರ ಸಮರ್ಪಣೆ ನೆರವೇರಿತು. ಶಿಬಿರದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಮಧ್ಯಾಹ್ನ ಕುಮಾರಿ ಆದಿತಿ ಕೊಂಕೋಡಿ ಇವರಿಂದ ಕಲಾಮುಕುಲದ ಸಂಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಪನ್ನವಾಯಿತು.