BW News Bureau : ಐತಿಹಾಸಿಕ ಹೂವಿನ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನೂತನ ಸಂವತ್ಸರದ ಮೊದಲ ಚೈತ್ರ ಪೂರ್ಣಿಮೆ ಶುಕ್ರವಾರ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಬೆಂಗಳೂರು ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯನ ದೇವಸ್ಥಾನದಿಂದ ಹೂವಿನ ಕರಗ ಹೊರಡಲಿದೆ. ಈ ಸಾಂಸ್ಕೃತಿಕ ಉತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ.
ತಿಗಳರ ಜನಾಂಗದ ಪೂಜಾರಿ ಮನೆತನಕ್ಕೆ ಸೇರಿದವರು ನಡೆಸಿಕೊಂಡು ಬರುತ್ತಿರುವ ಈ ಧಾರ್ಮಿಕ ಹಬ್ಬದಲ್ಲಿ ಈ ಬಾರಿ ಎಂ.ಲಕ್ಷ್ಮೀಶ್ ಹೂವಿನ ಕರಗ ಹೊರಲಿದ್ದಾರೆ. ಮಧ್ಯರಾತ್ರಿ ಹೊರಡುವ ಕರಗ ಹಳೇ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಸಂಚರಿಸಲಿದೆ.
ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ಕಬ್ಬನ್ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೆ.ಆರ್. ಮಾರುಕಟ್ಟೆ ಮೂಲಕ ಅಕ್ಕಿಪೇಟೆ, ಅರಳೆಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್ಪೇಟೆ, ಸುಣ್ಣಕಲ್ಪೇಟೆಗಳಲ್ಲಿ ಸಂಚರಿಸಲಿದೆ. ಕುಲಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ, ಸೂರ್ಯೋದಯದ ವೇಳೆಗೆ ದೇವಾಲಯ ಸೇರುತ್ತದೆ. ಈ ವೇಳೆ ಸುಮಾರು 86 ದೇವಸ್ಥಾನಗಳನ್ನು ಪ್ರದಕ್ಷಿಣೆ ಹಾಕಲಿದೆ.
ದ್ರೌಪದಿಯ ಮಾನಸ ಪುತ್ರರೆಂದೇ ತಿಗಳರ ಪೂಜಾರಿ ಮನೆತನದವರು ತಮ್ಮನ್ನು ನಂಬಿದ್ದಾರೆ. ದ್ವಾಪರಯುಗದಲ್ಲಿ ರಾಕ್ಷಸರ ಪಡೆಗಳನ್ನು ಸದೆಬಡಿಯಲು ಪಾಂಡವರು ಹಾಗೂ ದ್ರೌಪದಿ ಜನ್ಮತಾಳಿದ್ದರು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಅಂತೆಯೇ, ಕುರುಕ್ಷೇತ್ರ ನಡೆದ ಸಂದರ್ಭದಲ್ಲಿ ದ್ರೌಪದಿ ರಾಕ್ಷಸರನ್ನು ಸಂಹರಿಸಿ ಸ್ವರ್ಗಕ್ಕೆ ಹಿಂತಿರುಗುವಾಗ ತಿಮಿರಾಸುರ ಎಂಬ ರಾಕ್ಷಸನೋರ್ವ ಮಾತ್ರ ಬದುಕುಳಿದಿರುತ್ತಾನೆ. ಆಗ ದ್ರೌಪದಿ ವ್ಯೂಹವೊಂದನ್ನು ರಚಿಸಿಕೊಂಡು ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಕೆ ರಚಿಸಿಕೊಂಡ ವ್ಯೂಹದಲ್ಲಿ ವೀರಕುಮಾರರನ್ನು ಬರಮಾಡಿಕೊಂಡಿರುತ್ತಾಳೆ. ತಿಮಿರಾಸುರನ ಸಂಹಾರದ ನಂತರ ಆಕೆ ಮತ್ತೆ ಸ್ವರ್ಗಕ್ಕೆ ಹೋಗಲು ಸಿದ್ಧಳಾಗಿರುವಾಗ ವೀರಾಕುಮಾರರು ಬೇಸರ ವ್ಯಕ್ತಪಡಿಸುತ್ತಾರೆ. ಆಗ, ದ್ರೌಪದಿ ಪ್ರತಿ ವರ್ಷ ಚೈತ್ರಮಾಸದಲ್ಲಿ ಮೂರು ದಿನ ಭೂಲೋಕಕ್ಕೆ ಬರುವುದಾಗಿ ಭರವಸೆ ನೀಡಿರುತ್ತಾಳೆ. ಹೀಗಾಗಿ, ದ್ರೌಪದಿಯನ್ನು ಆಹ್ವಾನಿಸಿಕೊಳ್ಳಲು ಕರಗ ಆರಂಭವಾಯಿತು ಎಂಬುದು ಪ್ರತೀತಿ.