ಇಸ್ಲಾಮಾಬಾದ್ : ಭಾರತದೊಂದಿಗಿನ ಶಾಂತಿ ಮಾತುಕತೆ ನಿಂತಿಲ್ಲ; ಅದು ಮುಂದುವರಿಯುತ್ತಲೇ ಇದೆ ಎಂದು ಹೇಳುವ ಮೂಲಕ ಪಾಕ್ ಮತ್ತೆ ಉಲ್ಟಾ ಹೊಡೆದಿದೆ.
ಭಾರತದೊಂದಿಗಿನ ಶಾಂತಿ ಮಾತುಕತೆ ಪ್ರಕ್ರಿಯೆ ಪ್ರಕೃತ ಅಮಾನುಗೊಂಡಿದೆ' ಎಂದು ಭಾರತದಲ್ಲಿನ ಪಾಕ್ ಹೈಕಮಿಶನರ್ ಅಬ್ದುಲ್ ಬಾಸಿತ್ ಅವರು ಹೇಳಿದ ಕೆಲವೇ ದಿನಗಳ ಬಳಿಕ ಇದೀಗ ಪಾಕಿಸ್ಥಾನದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ನಫೀಸ್ ಝಕಾರಿಯಾ ಅವರು "ಭಾರತದೊಂದಿಗಿನ ಶಾಂತಿ ಮಾತುಕತೆ ಪ್ರಕ್ರಿಯೆಗೆ ಈಗಲೂ ದ್ವಾರ ಮುಕ್ತವಿದೆ ಎಂದು ಹೇಳಿದ್ದಾರೆ.
ಝಕಾರಿಯಾ ಅವರು ಇಸ್ಲಾಮಾಬಾದ್ ನಲ್ಲಿ ಸಾಪ್ತಾಹಿಕ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದಾಗ ಭಾರತ-ಪಾಕ್ ಶಾಂತಿ ಮಾತುಕತೆಗೆ ಈಗಲೂ ಬಾಗಿಲು ತೆರೆದುಕೊಂಡಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಹೌದು; ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಗೆ ಮಾತುಕತೆಯೇ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಉತ್ತರಿಸಿದರು. ಉಭಯ ದೇಶಗಳ ನಡುವೆ ಸಂವಾದ ಮತ್ತು ಮಾತುಕತೆಯನ್ನು ಜಾರಿಯಲ್ಲಿಡುವುದೇ ನಿಜವಾದ ಅತ್ಯುತ್ತಮ ರಾಜಕೀಯ ಮುತ್ಸದ್ದಿತನವಾಗಿದೆ ಎಂದು ಝಕಾರಿಯಾ ಹೇಳಿದರು.
ಕಳೆದ ಎಪ್ರಿಲ್ 7ರಂದು ನವದೆಹಲಿಯಲ್ಲಿ ನಡೆದಿದ್ದ ವಿದೇಶೀ ಬಾತ್ಮೀದಾರರ ಸಂಘದ ಸಭೆಯಲ್ಲಿ ಮಾತನಾಡುತ್ತಿದ್ದ ಪಾಕ್ ಹೈಕಮಿಶನರ್ ಅಬ್ದುಲ್ ಬಾಸಿತ್, ಭಾರತ-ಪಾಕ್ ನಡುವೆ ವಿದೇಶ ಕಾರ್ಯದರ್ಶಿಗಳ ಮಟ್ಟದ ಶಾಂತಿ ಮಾತುಕತೆಯ ಯಾವುದೇ ಸಭೆಯನ್ನು ಸದ್ಯಕ್ಕೆ ಏರ್ಪಡಿಸಲಾಗಿಲ್ಲ. ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆ ಪ್ರಕ್ರಿಯೆಯು ಸದ್ಯಕ್ಕೆ ಅಮಾನತುಗೊಂಡಿರುವುದಾಗಿ ನಾನು ಭಾವಿಸುತ್ತೇನೆ ಎಂಬುದಾಗಿ ಹೇಳಿದ್ದರು.