ವಾಷಿಂಗ್ಟನ್ : ಹವಾಮಾನ ಇಲಾಖೆ ಇತ್ತೀಚೆಗೆ ನೀಡಿರುವ ವರದಿಯಂತೆ ಈ ವರ್ಷ ಭಾರತದಲ್ಲಿ ಉತ್ತಮ ಮಳೆಯಾದರೆ ವೇಗವಾಗಿ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಉತ್ತಮ ಮಳೆ ಬಂದರೆ ದೇಶದ ರೈತರು ಚೆನ್ನಾಗಿ ಬೆಳೆ ಬೆಳೆಯಬಹುದು. ಇದರಿಂದ ನಮ್ಮ ಆರ್ಥಿಕ ಪ್ರಗತಿ ವೃದ್ಧಿಯಾಗುತ್ತದೆ ಎಂದು ಅವರು ಅಮೆರಿಕದ ವಾಷಿಂಗ್ಟನ್ ನಲ್ಲಿ ಅಂತಾರಾಷ್ಟ್ರೀಯ ಶಾಂತಿ ಕಾರ್ಯಕ್ರಮದಲ್ಲಿ ದೇಶದ ಪ್ರಗತಿಯ ಭವಿಷ್ಯ ಕುರಿತ ಭಾಷಣದಲ್ಲಿ ಹೇಳಿದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವರದಿ ಪ್ರಕಾರ, ಈ ವರ್ಷ ಭಾರತದ ಆರ್ಥಿಕ ಪ್ರಗತಿ ಶೇಕಡಾ 7.5ರಷ್ಟಾಗಲಿದೆ ಎಂದು ಹೇಳಿದೆ. ಭತ್ತ, ಗೋಧಿ, ಸಕ್ಕರೆ ಮತ್ತು ಹತ್ತಿ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಭಾರತ ಕೃಷಿ ಚಟುವಟಿಕೆಗಳಿಗೆ ಮಳೆಯನ್ನೇ ನಂಬಿಕೊಂಡಿದೆ. ಈ ವರ್ಷ ಮಾನ್ಸೂನ್ ಉತ್ತಮವಾಗಿರಬಹುದೆಂದು ಹವಾಮಾನ ಇಲಾಖೆ ವರದಿ ನೀಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಹೆಚ್ಚಾಗಿದೆ. ದೇಶದ ಆರ್ಥಿಕ ಪ್ರಗತಿ ಏರಿಕೆಯಾಗುವ ನಿರೀಕ್ಷೆಯಿದ್ದು, ರಿಸರ್ವ್ ಬ್ಯಾಂಕ್ ಇನ್ನಷ್ಟು ದರ ಕಡಿತ ಮಾಡುವ ನಿರೀಕ್ಷೆಯಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿಯವರು ವಾಷಿಂಗ್ಟನ್ ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕಿನ ಅರ್ಧ ವಾರ್ಷಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ವಿಶ್ವದ ಜಿ-20 ರಾಷ್ಟ್ರಗಳ ಸಭೆ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ.