ತಿರುವನಂತಪುರಂ : ಕೊಲ್ಲಂನ ಪರವೂರ್ ನ ಪುಟ್ಟಿಂಗಲ್ ದೇವಾಲಯದಲ್ಲಿ ಭಾನುವಾರ ನಸುಕಿನ ವೇಳೆ ಭೀಕರ ಅಗ್ನಿ ದುರಂತ ನಡೆದಿದ್ದು 86 ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ 1.30 ರ ವೇಳೆ ಮೂಕಾಂಬಿಕಾ ದೇವಾಲಯದ ಜಾತ್ರಾ ಮಹೋತ್ಸವದ ವೇಳೆ 50 ಸಾವಿರಕ್ಕೂ ಹೆಚ್ಚು ಭಕ್ತರು ಸೇರಿದ್ದರು . ಈ ವೇಳೆ ಪಟಾಕಿ ಸಂಗ್ರಹಿಸಿಟ್ಟಿದ್ದ ಕೋಣೆಗೆ ಬೆಂಕಿ ತಗುಲಿ ಘೋರ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.
ಸಿಡಿಮದ್ದು ಏಕಾಏಕಿ ಸಿಡಿದ ಕಾರಣ ಭಾರೀ ಬೆಂಕಿ ದೇವಾಲಯದ ಪ್ರಾಂಗಣದಲ್ಲಿ ವ್ಯಾಪಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಬೆಂಕಿಗೆ ,ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ನಸುಕಿನ ವೇಳೆ ದುರಂತ ಸಂಭವಿಸಿದ ಕಾರಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ವಿಳಂಬವಾಯಿತು . ಸ್ಥಳಕ್ಕೆ ಅಗ್ನಿಶಾಮಕದಳದ ಸಿಬಂದಿಗಳು ಆಗಮಿಸುವುದೂ ವಿಳಂಬವಾಯಿತು.
ಗಾಯಾಳುಗಳನ್ನು ತಿರುವನಂತಪುರಂನ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಮತ್ತು ಕೊಲ್ಲಂನ ಜಿಲ್ಲಾ ಆಸ್ಪತ್ರಗೆ ದಾಖಲಿಸಲಾಗಿದೆ. ಹಲವು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಭಾರೀ ಪ್ರಮಾಣದ ಸ್ಫೋಟಕಗಳು ಒಂದೇ ಬಾರಿಗೆ ಸಿಡಿದ ಕಾರಣ ಕೆಲವರ ಮೃತ ದೇಹಗಳು ಛಿದ್ರಗೊಂಡಿವೆ ಎಂದು ವರದಿಯಾಗಿದೆ.
ಪೊಲೀಸರು ,ಅಗ್ನಿಶಾಮಕದಳದ ಸಿಬಂದಿಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. ಬೆಳಗ್ಗಿನ ವೇಳೆ ಬೆಂಕಿಯನ್ನು ತಹಬಂದಿಗೆ ತರಲಾಗಿದ್ದು ,ಇದುವರೆಗೆ 14 ಮೃತದೇಹಗಳನ್ನು ಹೊರತೆಗೆಯಲಾಗಿದ್ದು , ಗುರುತು ಪತ್ತೆಯಾಗದಷ್ಟು ಸುಟ್ಟು ಕರಕಲಾಗಿವೆ.
ಗಾಯಾಳುಗಳಿಗೆ ಸರ್ಕಾರದ ವತಿಯಂದಲೇ ಚಿಕಿತ್ಸೆ ನೀಡಲಾಗುವುದು ಮತ್ತು ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಕೇರಳ ಆರೋಗ್ಯ ಸಚಿವ ವಿ.ಎಸ್ .ಶಿವಕುಮಾರ್ ತಿಳಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಯಾವುದೇ ಮುಂಜಾಗ್ರತ ಕ್ರಮವಿಲ್ಲದೆ ,ಪರವಾನಿಗೆಯಿಲ್ಲದೆ ಸಿಡಿಮದ್ದನ್ನು ಸಂಗ್ರಹಿಸಿಟ್ಟಿದ್ದು ,ಭದ್ರತಾ ಲೋಪವೇ ಅಮಾಯಕ ಜೀವಗಳ ಹಾನಿಗೆ ಕಾರಣವಾಯಿತು ಎಂದು ಹೇಳಲಾಗಿದೆ.
ದುರಂತಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು ,ಪರಿಹಾರಕಾರ್ಯಕ್ಕೆ ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡುತ್ತದೆ. ದೇವಾಲಯಕ್ಕೆ ಭೇಟಿ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.