ನವದೆಹಲಿ : ಅನಪೇಕ್ಷಿತ ಫತ್ವಾಗಳನ್ನು ಹೊರಡಿಸಬೇಡಿ ಎಂದು ಭಾರತೀಯ ಜನತಾ ಪಕ್ಷವು ದಾರೂಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಬೋಧನಾಲಯವನ್ನು ಕೇಳಿಕೊಂಡಿದೆ.
ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಇಸ್ಲಾಂ ವಿರೋಧಿಯಾಗಿದ್ದು ಅದನ್ನು ಕೂಗದಂತೆ ಮುಸ್ಲಿಮರಿಗೆ ದೇಶದ ಪ್ರಮುಖ ಇಸ್ಲಾಮಿಕ್ ಬೋಧನಾಲಯವಾಗಿರುವ ದಾರೂಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿತ್ತು.
ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಝಫರ್ ಇಸ್ಲಾಂ, ಈ ಫತ್ವಾ ಬಗ್ಗೆ ನನಗೆ ಇದೆ. ಮುಸ್ಲಿಮರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಏಕೆ ಕೂಗಬಾರದು ಎಂಬ ಬಗ್ಗೆ ನನಗೆ ಯಾವುದೇ ಕಾರಣಗಳು ಕಾಣುವುದಿಲ್ಲ. ದಾರೂಲ್ ಉಲೂಮ್ ಒಂದು ಒಳ್ಳೆಯ ಸಂಘಟನೆ ಎಂದು ನಾನು ತಿಳಿದಿದ್ದೇನೆ. ಆದರೆ ಅವರು ಈ ಬಗೆಯ ಅನಪೇಕ್ಷಿತ ಫತ್ವಾ ಹೊರಡಿಸದೆ ಸುಮ್ಮನಿರುವುದು ಒಳಿತು. ಇಸ್ಲಾಂ ಈ ಬಗೆಯ ಘೋಷಣೆಗಳನ್ನು ನಿರ್ಬಂಧಿಸುವುದಿಲ್ಲ. ಇಸ್ಲಾಂ ಪ್ರಕಾರ ನಿಮ್ಮ ಮಾತೃಭೂಮಿಯನ್ನು ಗೌರವಿಸುವ ಯಾವುದೇ ಘೋಷಣೆಗಳನ್ನು ಕೂಗುವುದಕ್ಕೆ ನಿಮಗೆ ಅನುಮತಿ ಇದೆ. ಮುಸ್ಲಿಮರು ತಮ್ಮ ದೇಶವನ್ನು ಏಕೆ ಪ್ರಶಂಸಿಸಬಾರದು ಎಂಬ ಬಗ್ಗೆಯೂ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಮುಸ್ಲಿಮರು ಕೂಗಬಾರದು ಎಂಬ ಫತ್ವಾವನ್ನು ದಾರೂಲ್ ಉಲೂಮಾ ದೇವಬಂದ್ ಹಿಂಪಡೆಯಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಮಾತ್ರವಲ್ಲದೆ ಈ ಬಗೆಯ ಘೋಷಣೆಗಳು ಇಸ್ಲಾಮಿಕ್ ಕಾನೂನಿನಡಿ ಸಮ್ಮತವಾಗಿವೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವಂತೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.