ಕೊಲ್ಕತ್ತಾ : ಕೊಲ್ಕತ್ತಾದ ಬಾಬಾ ಬಜಾರ್ ನ ಗಣೇಶ್ ಟಾಕೀಸ್ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿವೇಕಾನಂದ ಫ್ಲೈಓವರ್ ಕುಸಿತದಲ್ಲಿ ಮೃತರ ಸಂಖ್ಯೆ 21ಕ್ಕೇರಿದೆ.
ಉತ್ತರ ಕೊಲ್ಕತಾದಲ್ಲಿ ಮಾರ್ಚ್ 31 ರಂದು ಮಧ್ಯಾಹ್ನ ಈ ದುರಂತ ಸಂಭವಿಸಿದ್ದು, ಇಲ್ಲಿಯವರೆಗೂ 21 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. 100ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಪ್ರಸ್ತುತ ಅವಶೇಷಗಳಡಿ 150ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ಡಿಆರ್ಎಫ್) ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕೋಲ್ಕತಾ ಫ್ಲೈಓವರ್ ಕುಸಿದಿದ್ದಕ್ಕೆ ಹೊಣೆ ಹೊರಬೇಕಾಗಿದ್ದ ಇದರ ನಿರ್ಮಾಣಕಾರ ಐವಿಆರ್ಸಿಎಲ್ ಎಂಬ ತೆಲಂಗಾಣ ಮೂಲದ ಕಂಪೆನಿಯು, 'ಇದು ದೇವರ ಕೃತ್ಯ' ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿ ಕೈತೊಳೆದುಕೊಂಡಿದೆ.
'ನಮ್ಮ ಕಂಪೆನಿಯು 27 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿದೆ. ಒಮ್ಮೆಯೂ ಕೂಡ ಇಂಥ ಅವಘಡಗಳು ಸಂಭವಿಸಿಲ್ಲ. ಫ್ಲೈಓವರ್ ನಿರ್ಮಾಣ ಕಾಮಗಾರಿಯಲ್ಲೂ ನಾವು ಯಾವುದೇ ಲೋಪ ಎಸಗಿರಲಿಲ್ಲ, ಇದು ದೇವರ ಕೃತ್ಯ' ಎಂದು ಕಂಪೆನಿಯ ಸಮೂಹ ಮುಖ್ಯಸ್ಥ ಕೆ. ಪಾಂಡುರಂಗ ರಾವ್ ತಿಳಿಸಿದ್ದಾರೆ.
'ಶೇ.70ರಷ್ಟು ಕಾಮಗಾರಿ ಮುಗಿದಿತ್ತು. 60ನೇ ಸ್ಲ್ಯಾಬ್ ಹಾಕುವಾಗ ಘಟನೆ ನಡೆದಿದೆ' ಎಂದು ಐವಿಆರ್ಸಿಎಲ್ ನಿರ್ದೇಶಕ ಎಜಿಕೆ ಮೂರ್ತಿ ಹೇಳಿದ್ದಾರೆ.
ಕೊಲ್ಕತಾದಲ್ಲಿ ಪತನಗೊಂಡಿರುವ ನಿರ್ಮಾಣ ಹಂತದ ಫ್ಲೈಓವರ್ ಕಾಮಗಾರಿ 2009ರಲ್ಲೇ ಆರಂಭವಾಗಿತ್ತು. ಸುಮಾರು 2 ಕಿ.ಮೀ. ಇರುವ ಈ ಫ್ಲೈಓವರ್ ಕಾಮಗಾರಿ, ಆರಂಭಗೊಂಡ 18 ತಿಂಗಳಲ್ಲೇ ಮುಗಿಯಬೇಕಿತ್ತು. ಆದರೆ ನಿಗದಿತ ಅವಧಿಯಲ್ಲಿ ಕಾರ್ಯ ಮುಗಿಯದೇ 7 ವರ್ಷಗಳಿಂದ ಗಡುವು ವಿಸ್ತರಣೆಯಾಗುತ್ತಲೇ ಬಂದಿತ್ತು. ಕಾಮಗಾರಿ ವೆಚ್ಚ 165 ಕೋಟಿ ರೂ. ಆಗಿದ್ದು, ಈವರೆಗೆ ಕೇವಲ ಶೇ.70ರಷ್ಟು ಕಾಮಗಾರಿ ಮುಗಿದಿದೆ. ಈಗ ಸುಮಾರು 100 ಮೀ. ವ್ಯಾಪ್ತಿಯಲ್ಲಿನ ಫ್ಲೈಓವರ್ ಧರಾಶಾಯಿಯಾಗಿದೆ. ಕಳಪೆ ಕಾಮಗಾರಿ ಫ್ಲೈಓವರ್ ಕುಸಿತಕ್ಕೆ ಕಾರಣ ಎನ್ನಲಾಗಿದೆ.