Basavanagudi : ಬೆಂಗಳೂರಿನ ಪ್ರತಿಷ್ಠಿತ ಸಂಗೀತ ಸಂಸ್ಥೆಗಳಲ್ಲೊಂದಾದ 'ಸಂಗೀತ ಕೃಪಾ ಕುಟೀರ'ವು 'ಸ್ಮರಣೋತ್ಸವ' ವಿಶೇಷ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾರ್ಚ್ 26 ಶನಿವಾರದಂದು ಸಂಜೆ 5:00ಗಂಟೆಯಿಂದ ಸಂಗೀತ ಮಹಾಮಹೋಪಾದ್ಯಾಯ ಗುರು ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಗಳ ಸ್ಮರಣೋತ್ಸವವನ್ನೂ ಹಾಗೂ ಮಾರನೆಯ ದಿನ ಮಾರ್ಚ್ 27 ಭಾನುವಾರದಂದು 10:00ಗಂಟೆಯಿಂದ ಸಂಗೀತ ವಿದ್ವಾಂಸ ಎಚ್.ಆರ್.ಸೀತಾರಾಮ ಶಾಸ್ತ್ರಿ ಅವರ ಸ್ಮರಣಾರ್ಥ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಬನಶಂಕರಿ ೧ನೇ ಹಂತದಲ್ಲಿರುವ ವಿವೇಕಾನಂದ ವಿದ್ಯಾ ಶಾಲೆ(ಹನುಮಂತನಗರ, ಪಿ ಇ ಎಸ್ ಕಾಲೇಜು ಹಿಂಬಾಗ)ಯಲ್ಲಿ ಆಯೋಜಿಸಲಾಗಿದೆ.
ಮೊದಲ ದಿನ ಗವಾಯಿಗಳ ಸ್ಮರಣೋತ್ಸವದಂದು ಮೊದಲಿಗೆ ಸಂಗೀತ ಕೃಪಾ ಕುಟೀರದ ಮಹಿಳಾ ವಿದ್ಯಾರ್ಥಿಗಳು ತಬಲಾ ಸೋಲೋ ಪ್ರಸ್ತುತ ಪಡಿಸಿದರೆ ನಂತರ ಖ್ಯಾತ ಹಿಂದುಸ್ಥಾನಿ ಗಾಯಕರಾದ ಸುರಮಣಿ ದತ್ತಾತ್ರೇಯ ಅವರ ಗಾನ ಸುಧೆ ಸಹೃದಯರ ಮನ ಸೂರೆಗೊಳ್ಳಲಿದೆ. ಅವರಿಗೆ ಹಾರ್ಮೋನಿಯಂನಲ್ಲಿ ಶ್ರೀ ಮಧುಸೂಧನ ಭಟ್ ಹಾಗೂ ತಬಲಾದಲ್ಲಿ ಶ್ರೀ ವಿಕಾಸ್ ನೆರಗಲ್ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಉಭಯ ಗಾನ ವಿದುಷಿ ಸಂಗೀತ ಕಲಾ ರತ್ನ ಶಾಮಲಾ.ಜಿ. ಭಾವೆ ಅವರು ಆಗಮಿಸಲಿದ್ದಾರೆ.
ಇನ್ನು ಮಾರನೆಯ ದಿನ ಮಾರ್ಚ್ 27 ಭಾನುವಾರದಂದು 10:00 ಗಂಟೆಗೆ ಪ್ರಾರಂಭವಾಗುವ ಸ್ಮರಣೋತ್ಸವದಲ್ಲಿ ಖ್ಯಾತ ವಿದುಷಿ ಕಲಾವತಿ ಅವಧೂತ್.ವಿ ಅವರು ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಿಂದ ಸಂಗೀತಾಸಕ್ತರ ಮನತಣಿಸಲಿದ್ದಾರೆ. ಅವರಿಗೆ ಪಿಟೀಲಿನಲ್ಲಿ ವಿದುಷಿ ನಳಿನಾ ಮೋಹನ್. ವಿ, ಮೃದಂಗದಲ್ಲಿ ಶ್ರೀ ವಿನೋದ್ ಶ್ಯಾಮ್ ಹಾಗೂ ಖಂಜೀರದಲ್ಲಿ ಶ್ರೀ ಸಮೀರ್ ಅವರು ಸಹಕರಿಸಲಿದ್ದಾರೆ.
ಎರಡು ದಿನ ನಡೆಯುವ ವಿಶೇಷ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಸಂಗೀತ ಕೃಪಾ ಕುಟೀರದಿಂದ ಕಲಾಭಿಮಾನಿಗಳಿಗೆ ಆತ್ಮೀಯ ಸ್ವಾಗತವಿದ್ದು ಪ್ರವೇಶ ಉಚಿತವಾಗಿದೆ ಎಂದು ಸಂಗೀತ ಕೃಪಾ ಕುಟೀರದ ಮುಖ್ಯಸ್ಥರೂ ಹಾಗೂ ಕಾರ್ಯಕ್ರಮದ ಆಯೋಜಕರೂ ಆದ ವಿದ್ವಾನ್ ಏನ್.ಎಸ್.ಗುಂಡಾಶಾಸ್ತ್ರಿಗಳು ತಿಳಿಸಿದ್ದಾರೆ.