Ujire : ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಆಳ್ವಾಸ್ ಮೀಡಿಯಾ ಬಝ್ - 2016ರ ರಾಷ್ಟ್ರೀಯ ಮಾಧ್ಯಮ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು 11 ಸ್ಪರ್ಧೆಗಳ ಪೈಕಿ 10 ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುವುದರೊಂದಿಗೆ ಸಂಸ್ಥೆಯ ಹಿರಿಮೆಗೆ ಕೈಗನ್ನಡಿಯಾಗಿದ್ದಾರೆ.
ಈ 2 ದಿನಗಳ ಮೀಡಿಯಾ ಬಝ್ ಉತ್ಸವದೊಂದಿಗೆ ತನಿಖಾ ಪತ್ರಿಕೋದ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಆಳ್ವಾಸ್ 'ಮೀಡಿಯಾ ಬಝ್’ ಮಾಧ್ಯಮ ಉತ್ಸವದಲ್ಲಿ ಈ ಬಾರಿ ಒಟ್ಟು 11 ವಿಭಾಗಗಳಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಛಾಯಾಚಿತ್ರ ವಿಭಾಗದಲ್ಲಿ ವಿಲ್ಸನ್ ದೀಪಕ್ ಪಿಂಟೋ (ಪ್ರಥಮ), ಮ್ಯಾಡ್ ಆಡ್ - ಪೂಜಾ ಪಕ್ಕಳ, ಆನಂದ್, ರಾಜೇಶ್ ದೊಡ್ಡನಗೌಡ, ಚೇತನ್ ಸೊಲಗಿ (ಪ್ರಥಮ), ಲೈವ್ ರಿಪೋರ್ಟ್- ದೊಡ್ಡನಗೌಡ, ಪವಿತ್ರ (ಪ್ರಥಮ), ಮಾಕ್ ಪ್ರೆಸ್ - ಪವಿತ್ರ (ದ್ವಿತೀಯ), ವಿಜಿಹಂಟ್- ಪೂಜಾ. ಪಕ್ಕಳ (ದ್ವಿತೀಯ), ಪುಟ ವಿನ್ಯಾಸ- ರಕ್ಷಿತಾ ಕರ್ಕೆರಾ, ಶಶಾಂಕ್ (ದ್ವಿತೀಯ), ರಸಪ್ರಶ್ನೆ - ವಿನಯ್, ಆನಂದ್ (ದ್ವಿತೀಯ), ಪ್ರೊಡಕ್ಟ್ ಪ್ರಮೋಶನ್- ಚೇತನ್ ಸೊಲಗಿ, ಶಶಾಂಕ್, ವಿನಯ್, ವಿಲ್ಸನ್ ದೀಪಕ್ ಪಿಂಟೋ (ತೃತೀಯ), ಕಿರುಚಿತ್ರ - ಚೇತನ್ ಸೊಲಗಿ, ಪ್ರಸಾದ್ ಶೆಟ್ಟಿ (ತೃತೀಯ), ರೇಡಿಯೋ ನುಡಿಚಿತ್ರ - ಸಂಜೀವ್, ಚಂದ್ರಯ್ಯ (ತೃತೀಯ) ಸ್ಥಾನ ಗಳಿಸುವುದರೊಂದಿಗೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿತು.
ಈ ಮಾಧ್ಯಮ ಉತ್ಸವದಲ್ಲಿ ರಾಜ್ಯದ ಸುಮಾರು 18 ಕಾಲೇಜುಗಳಿಂದ ಬಂದಿದ್ದ ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳನ್ನು ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ ಹೆಗಡೆ ಹಾಗೂ ಉಪನ್ಯಾಸಕರಾದ ಸುನಿಲ್ ಹೆಗ್ಡೆ, ಮಾಧವ ಹೊಳ್ಳ ಹಾಗೂ ಶೃತಿ ಜೈನ್ ತರಬೇತುಗೊಳಿಸಿದ್ದಾರೆ. ಕಳೆದ ವರ್ಷವೂ ಮೀಡಿಯಾ ಬಝ್ ಮಾಧ್ಯಮ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿ ಗೆದ್ದಿತ್ತು.